ADVERTISEMENT

ರಾಜ್ಯದ ಬಂಕ್‌ಗಳಿಗೆ ಆಂಧ್ರದ ವಾಹನ

ನೆರೆ ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:11 IST
Last Updated 3 ಜೂನ್ 2015, 20:11 IST
ರಾಜ್ಯದ ಬಂಕ್‌ಗಳಿಗೆ ಆಂಧ್ರದ ವಾಹನ
ರಾಜ್ಯದ ಬಂಕ್‌ಗಳಿಗೆ ಆಂಧ್ರದ ವಾಹನ   

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ):  ನೆರೆಯ ಆಂಧ್ರಪ್ರದೇಶದಲ್ಲಿ ಇಂಧನ ಮೇಲಿನ ತೆರಿಗೆಯನ್ನು ತೀವ್ರವಾಗು ಹೆಚ್ಚಿಸಿದ ಪರಿಣಾಮ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳಲ್ಲಿ ವಹಿವಾಟು ಹೆಚ್ಚಿದೆ.

ಹಲವು ವರ್ಷಗಳಿಂದಲೂ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ವ್ಯತ್ಯಾಸವಿದೆ. ಇದರಿಂದಾಗಿ ಆಂಧ್ರದಲ್ಲಿ ನಮ್ಮ ರಾಜ್ಯಕ್ಕಿಂತಲೂ ಪ್ರತಿ ಲೀಟರ್‌ ಪೆಟ್ರೋಲ್ ದರದಲ್ಲಿ ಸುಮಾರು ₨ 3 ಕಡಿಮೆ ಇರುತ್ತಿತ್ತು.

ಆದರೆ, ಕಳೆದ ವರ್ಷ ಅಖಂಡ ಆಂಧ್ರ ವಿಭಜನೆಯಾಗಿ ಆಂಧ್ರಪ್ರದೇಶ ದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊ ಳ್ಳಲು ಹಣ ಬೇಕು ಎಂಬ ಕಾರಣದಿಂದ ಅಲ್ಲಿನ ಸರ್ಕಾರ ಇಂಧನದ ಮೇಲೆ ಹೆಚ್ಚು ತೆರಿಗೆ ವಿಧಿಸಿದೆ.

ಹೀಗಾಗಿ ಕರ್ನಾಟಕಕ್ಕಿಂತಲೂ ಆಂಧ್ರಪ್ರದೇಶದಲ್ಲಿ ಇಂಧನ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.

ತಾಲ್ಲೂಕಿನ ಆಂಧ್ರ ಗಡಿಭಾಗದ ಬೆಂಗಳೂರು–ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪೆಟ್ರೋಲ್‌ ಬಂಕ್‌ಗಳು ತಲೆ ಎತ್ತಿವೆ.

ಬಂಕ್‌ ಮಾಲೀಕರು ಮುಖ್ಯವಾಗಿ ಕಣ್ಣಿಟ್ಟಿರುವುದು ಹೆದ್ದಾರಿ ವಾಹನಗಳ ಮೇಲೆ. ಅದರಲ್ಲೂ ಕರ್ನಾಟಕದ ವಾಹನಗಳು, ಗಣಿ ಲಾರಿಗಳ ಮೇಲೆ. ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಗಡಿಭಾಗದ ಬಂಕ್‌ ಮಾಲೀಕ ಅಜ್ಜಪ್ಪ, ‘ಮೂರು ತಿಂಗಳ ಹಿಂದೆ ವ್ಯಾಟ್‌ ಏರಿಕೆಯಾಗಿದೆ. ನಿತ್ಯ ಇಲ್ಲಿ ಒಂದೊಂದು ಬಂಕ್‌ಗಳಲ್ಲಿ 50ರಿಂದ 60 ಬಸ್‌ಗಳು, 75ಕ್ಕೂ ಹೆಚ್ಚು ಲಾರಿಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳೂ ಇಂಧನ ತುಂಬಿಸಿಕೊಳ್ಳುತ್ತಿದ್ದವು. ಪ್ರತಿ ಬಂಕ್‌ನಲ್ಲಿ ದಿನವೊಂದಕ್ಕೆ ಅಂದಾಜು 20 ಸಾವಿರ ಲೀಟರ್ ಇಂಧನ ಮಾರಾಟವಾಗುತ್ತಿತ್ತು. ತೆರಿಗೆ ಏರಿಕೆ ಮಾಡಿದ ಕಾರಣ ಈಗ ನಿತ್ಯ ಕೇವಲ 1,000ದಿಂದ 1,500 ಲೀಟರ್ ಇಂಧನ ಮಾರಾಟವಾಗುತ್ತಿದೆ. ಇಲ್ಲಿನ ವಹಿವಾಟು ಬಳ್ಳಾರಿ, ರಾಂಪುರ, ಚಳ್ಳಕೆರೆ, ಚಿತ್ರದುರ್ಗ ಬಂಕ್‌ಗಳಿಗೆ ವರ್ಗಾವಣೆಯಾಗಿದೆ. ಲಕ್ಷಾಂತರ ರೂಪಾಯಿ ವಹಿವಾಟು ನಷ್ಟವಾಗಿದೆ. ಇದರಿಂದ ದಿಕ್ಕುತೋಚದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಆಂಧ್ರಪ್ರದೇಶದಲ್ಲಿ ತೆರಿಗೆ ಹೆಚ್ಚಳದ ನಂತರ ಅಲ್ಲಿನ ವಾಹನ ಮಾಲೀಕರು ನಮ್ಮ ಕಡೆ ಇಂಧನಕ್ಕಾಗಿ ಬರುತ್ತಿದ್ದಾರೆ. ಈವರೆಗೆ ಇಲ್ಲಿನ ವಾಹನಗಳು ಆಂಧ್ರದತ್ತ ಹೋಗುತ್ತಿದ್ದವು. ಕರ್ನಾಟಕದಲ್ಲಿ ಪ್ರತಿ ಲೀಟರ್‌ ಡೀಸೆಲ್‌ ಹಾಗೂ ಪೆಟ್ರೋಲ್‌ ದರ ಸರಾಸರಿ ₨ 2.75 ಕಡಿಮೆಯಿದೆ. ಇದರಿಂದ ಸದ್ಯಕ್ಕೆ ಈ ಭಾಗದ ಬಂಕ್‌ ಮಾಲೀಕರಿಗೆ ಶುಕ್ರದೆಸೆ ಆರಂಭವಾಗಿದೆ’ ಎನ್ನುತ್ತಾರೆ ಮೊಳಕಾಲ್ಮುರಿನ ಬಂಕ್‌ ಮಾಲೀಕ ವೆಂಕಟೇಶ್‌.

ಲ್ಲಿನವರು ಇಲ್ಲಿಗೆ...!
ಆಂಧ್ರಪ್ರದೇಶದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹೆಚ್ಚಳಕ್ಕೂ ಮೊದಲು ಗಡಿಯಲ್ಲಿರುವ ಓಬಳಾಪುರಂ ಸುತ್ತಮುತ್ತ ಇರುವ ಪೆಟ್ರೋಲ್‌ ಬಂಕ್‌ಗಳಿಗೆ ರಾಜ್ಯದ ವಾಹನ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಾಗಿದ್ದರು. ಆದರೆ, ತೆರಿಗೆ ಹೆಚ್ಚಿಸಿದ ನಂತರ, ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಆಂಧ್ರಪ್ರದೇಶ ಗಡಿಭಾಗದ ಗ್ರಾಹಕರು ರಾಜ್ಯದ ಪೆಟ್ರೋಲ್ ಬಂಕ್‌ಗಳತ್ತ ಬರುತ್ತಿದ್ದಾರೆ.


 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT