ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ಸರ್ಕಾರಕ್ಕೆ ತಾಕೀತು

​ಪ್ರಜಾವಾಣಿ ವಾರ್ತೆ
Published 23 ಜೂನ್ 2016, 19:30 IST
Last Updated 23 ಜೂನ್ 2016, 19:30 IST

ಬೆಂಗಳೂರು: ‘ರಾಜ್ಯೋತ್ಸವ ಪ್ರಶಸ್ತಿ ನೀಡುವುದಕ್ಕೆ ಯಾವುದೇ ಮಾನದಂಡ ಇಲ್ಲವಾಗಿದೆ’ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ದಿಕ್ಕು ದೆಸೆ ಇಲ್ಲದೆ ನೀಡುವ ಈ ಪ್ರಶಸ್ತಿ ನೀಡಿಕೆಯನ್ನು ನಿಲ್ಲಿಸಿಬಿಡಿ’ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

‘ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕುರಿತಂತೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು. ಇಲ್ಲವಾದರೆ ಸಂಬಂಧಿಸಿದವರನ್ನು ಕೋರ್ಟ್‌ಗೆ ಕರೆಸಿ ವಿಚಾರಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಎಚ್ಚರಿಸಿದ್ದಾರೆ.

‘ಹೈಕೋರ್ಟ್‌ ನಿರ್ದೇಶನವಿದ್ದರೂ ನನಗೆ 2015–16ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿಲ್ಲ’ ಎಂದು ಆರೋಪಿಸಿ ಸಾಹಿತಿ ಬಿ.ವಿ. ಸತ್ಯನಾರಾಯಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ನಜೀರ್‌ ಗುರುವಾರ ವಿಚಾರಣೆ ನಡೆಸಿದರು.

ಈ ವೇಳೆ ಸರ್ಕಾರದ ಧೋರಣೆಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಅವರು, ‘ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸೂಕ್ತ ಮಾರ್ಗದರ್ಶಿ ಸೂತ್ರಗಳ ಅನುಸಾರವೇ ವಿತರಣೆಯಾಗಬೇಕು.

ಈ ಸಂಬಂಧ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ಮುಂದಿನ ವಿಚಾರಣೆ ವೇಳೆಗೆ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಸರ್ಕಾರಿ ವಕೀಲರಿಗೆ ನಜೀರ್‌ ತಾಕೀತು ಮಾಡಿದರು. ‘ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ನಗದು ಕೂಡಾ ನೀಡಲಾಗುತ್ತದೆ. ಇದು ಸಾರ್ವಜನಿಕರ ತೆರಿಗೆಯ ಹಣ. ಇದು ಅನರ್ಹರ ಪಾಲಾಗಬಾರದು. ಸರ್ಕಾರ ತನಗೆ ಇಷ್ಟಬಂದವರನ್ನೆಲ್ಲಾ ಕರೆಸಿ ಹೂಮಾಲೆ ಹಾಕಿ ಪ್ರಶಸ್ತಿ ನೀಡುವುದು ಯಾವ ಶ್ರೇಯಸ್ಸಿಗೆ’ ಎಂದು ನಜೀರ್‌ ಪ್ರಶ್ನಿಸಿದರು.

ಪ್ರಭಾವ ಇದ್ದರೆ ಪ್ರಶಸ್ತಿ..!
‘ರಾಜಕೀಯ ಪ್ರಭಾವವಿದ್ದರೆ ಪ್ರಶಸ್ತಿಗಳನ್ನು ಪಡೆಯಬಹುದು’ ಎಂದು ಸರ್ಕಾರವನ್ನು ನ್ಯಾಯಮೂರ್ತಿ ನಜೀರ್‌ ಕುಟುಕಿದರು. ‘ನಾಯಿನೆರಳು’, ‘ದಾಟು’ ಮತ್ತು ‘ವಂಶವೃಕ್ಷ’ ದಂತಹ ಹಲವು ಮಹಾನ್ ಕೃತಿಗಳಿಗೆ ಇನ್ನೂ ಜ್ಞಾನಪೀಠ ಪ್ರಶಸ್ತಿ ಸಿಕ್ಕಿಲ್ಲ. ಪ್ರಶಸ್ತಿ ನೀಡಿಕೆಯ ವಿಚಾರದಲ್ಲಿ ಕೋರ್ಟ್‌ ಕೂಡಾ ನಿರ್ದಿಷ್ಟ ನಿರ್ದೇಶನ ನೀಡಲಾಗದು’ ಎಂದರು.

ಇಂತಹ ಪ್ರಕರಣಗಳನ್ನು ನೋಡಿದರೆ `ಸಾಹಿತಿ ನೀನು ಸಾಯುತಿ' ಎಂಬುದಾಗಿ ನಮ್ಮ ಹಿರಿಯ ಹೇಳಿದ ಮಾತು ನೆನಪಾಗುತ್ತದೆ ಎಂದು ನಜೀರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT