ನವದೆಹಲಿ: ಅಪಾಯದ ಅಂಚಿನಲ್ಲಿರುವ ರಣಹದ್ದುಗಳ ಆವಾಸಸ್ಥಾನವಾಗಿರುವ ರಾಮದೇವರ ಬೆಟ್ಟದ ಸುತ್ತಲಿನ 7.08 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ರಾಮದೇವರ ಬೆಟ್ಟ ರಣಹದ್ದುಗಳು ಇರುವ ದಕ್ಷಿಣ ಭಾರತದ ಏಕೈಕ ಸ್ಥಳವಾಗಿದೆ.
ಬೆಂಗಳೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ರಾಮದೇವರ ಬೆಟ್ಟವು 346 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಮೈಸೂರು ಆನೆ ಮೀಸಲು ಅರಣ್ಯದ ಭಾಗವಾಗಿರುವ ಈ ಬೆಟ್ಟದಲ್ಲಿ ಭಾರಿ ಸಂಖ್ಯೆಯಲ್ಲಿ ಕರಡಿಗಳೂ ಇವೆ. ಹಾಗಾಗಿ ಈ ಎರಡೂ ಸಂಕುಲವನ್ನು ರಕ್ಷಿಸುವುದಕ್ಕಾಗಿ ಈ ಪ್ರದೇಶವನ್ನು ಪರಿಸರಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ.
ಕಳೆದ ಜೂನ್ನಲ್ಲಿಯೇ ಪರಿಸರ ಸಚಿವಾಲಯವು ಕರಡು ಅಧಿಸೂಚನೆ ಹೊರಡಿಸಿತ್ತು. ಈಗ ಅದನ್ನು ಅಂತಿಮಗೊಳಿಸಲಾಗಿದೆ. ಪರಿಸರಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಆರು ಗ್ರಾಮಗಳು ಮತ್ತು ಒಂದು ಜನವಸತಿ ಪ್ರದೇಶಗಳಿವೆ.
ಪರಿಸರ ಸೂಕ್ಷ್ಮ ಪ್ರದೇಶವನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಹೊಣೆಯಾಗಿದೆ. ಪರಿಸರ ಸೂಕ್ಷ್ಮ ವಲಯದ ನಿಯಮಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ 11 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ನವಿಲುಧಾಮ: ಕರಡು ಪ್ರಕಟ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಆದಿಚುಂಚನಗಿರಿ ನವಿಲುಧಾಮದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆಯನ್ನು ಪರಿಸರ ಸಚಿವಾಲಯ ಆರಂಭಿಸಿದೆ. ಇಲ್ಲಿ 99 ಜಾತಿಯ ಪಕ್ಷಿಗಳಿವೆ. ಅವುಗಳ ಪೈಕಿ 25 ಕರ್ನಾಟಕದ ಒಳನಾಡಿಗೇ ವಿಶಿಷ್ಟವಾದುದಾಗಿವೆ.
ಇದೇ 6ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಜನರು 60 ದಿನಗಳ ಒಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಬಹುದಾಗಿದೆ. ಕರಡು ಪ್ರಕಾರ 4.55 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.