ನವದೆಹಲಿ: ರಾಮಕಥಾ ಗಾಯಕಿ ಮೇಲೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನಡೆಸಿದ್ದಾರೆನ್ನಲಾದ ಅತ್ಯಾಚಾರ ಪ್ರಕರಣ ಕುರಿತು ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ನೇತೃತ್ವದ ನಾಲ್ವರ ತಂಡ ಶನಿವಾರ ರಾಜ್ಯಕ್ಕೆ ತೆರಳಲಿದೆ.
ಮಹಿಳಾ ಆಯೋಗದ ಸದಸ್ಯೆ ಸೈನಾ ಶಫೀಕ್, ಸುಪ್ರೀಂ ಕೋರ್ಟ್ ವಕೀಲೆ ಅಪರ್ಣಾ ಭಟ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಹೇಮಾ ಪ್ರಸನ್ನ ಅವರು ಮಹಿಳಾ ಆಯೋಗದ ವಿಚಾರಣಾ ತಂಡದಲ್ಲಿದ್ದಾರೆ. ಸ್ವಾಮೀಜಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ, ಅವರ ಕುಟುಂಬದ ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲಿದೆ.
ಆಯೋಗವು ಸ್ವಯಂ ಪ್ರೇರಿತವಾಗಿ ರಾಮಚಂದ್ರಾಪುರ ಮಠದ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿಕೊಂಡಿದೆ. ಹತ್ತು ದಿನದೊಳಗೆ ವಿಚಾರಣಾ ತಂಡ ಮಹಿಳಾ ಆಯೋಗಕ್ಕೆ ವರದಿಯನ್ನು ಸಲ್ಲಿಸಲಿದೆ. ರಾಮಕಥಾ ಗಾಯಕಿ ವಿರುದ್ಧ ಸ್ವಾಮೀಜಿ ಅನುಯಾಯಿಗಳು ಹೊನ್ನಾವರ ನ್ಯಾಯಾಲಯದಲ್ಲಿ ‘ಬ್ಲ್ಯಾಕ್ಮೇಲ್’ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಮಹಿಳೆ ಮತ್ತು ಅವರ ಪತಿ ಬಂಧನಕ್ಕೊಳಗಾಗಿದ್ದರು. ಅನಂತರ ಜಾಮೀನು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.