ಬೆಂಗಳೂರು: ನೋಟು ಬದಲಾವಣೆ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರೌಡಿ ವಿ.ನಾಗರಾಜ್ ಹಾಗೂ ಆತನ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಈ ಕುರಿತಂತೆ ನಾಗರಾಜ್, ಶಾಸ್ತ್ರಿ ಮತ್ತು ಗಾಂಧಿ ಸಲ್ಲಿಸಿದ್ದ ಪ್ರತ್ಯೇಕ ಏಳು ಅರ್ಜಿಗಳನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ವಕೀಲ ರವೀಂದ್ರ ಕಾಮತ್, ‘ಪೊಲೀಸರು ಪೂರ್ವ ಸಿದ್ಧತೆಯೊಂದಿಗೆ ಏಳು ಎಫ್ಐಅರ್ ದಾಖಲಿಸಿದ್ದಾರೆ. ಇವೆಲ್ಲಾ ಸುಳ್ಳಿನಿಂದ ಕೂಡಿವೆ ಮತ್ತು ಒಂದೇ ತೆರನಾಗಿವೆ. ಈಗಾಗಲೇ ನಾಲ್ಕು ತಿಂಗಳಿನಿಂದ ಅರ್ಜಿದಾರರು ಬಂಧನದಲ್ಲಿದ್ದಾರೆ. ನೋಟು ಅಮಾನ್ಯ ನಿಯಮಗಳ ಅನುಸಾರ ಆರೋಪಿಯನ್ನು ಬಂಧನದಲ್ಲಿ ಇರಿಸಲು ಅವಕಾಶವಿಲ್ಲ. ಆದ್ದರಿಂದ ಜಾಮೀನು ನೀಡಬೇಕು’ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು. 2017ರ ಮೇ 11ರಂದು ನಾಗರಾಜ್ನನ್ನು ಪೊಲೀಸರು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.