ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಒಂದು ವರ್ಷದಿಂದ ಖಾಲಿ ಇರುವ ಮೂರು ಸ್ಥಾನಗಳಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ವಿಷಯದಲ್ಲಿ ಗೊಂದಲ ಮುಂದುವರಿದಿದೆ.
ಮೋಹನ್ ಕೊಂಡಜ್ಜಿ, ಕೆ.ಪಿ. ನಂಜುಂಡಿ, ಸಿ.ಎಂ. ಲಿಂಗಪ್ಪ ಅವರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗಿತ್ತು.
ಆ ಬಳಿಕ, ಲಿಂಗಪ್ಪ ಬದಲು ಜಿ.ಸಿ. ಚಂದ್ರಶೇಖರ್ ಅವರನ್ನು ನೇಮಕ ಮಾಡಬೇಕು ಎಂಬ ಲಾಬಿ ಬಲವಾಗಿತ್ತು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ ಅವರು ಲಿಂಗಪ್ಪ ಬೆಂಬಲಕ್ಕೆ ನಿಂತಿದ್ದರಿಂದಾಗಿ ಚಂದ್ರಶೇಖರ್ ಯತ್ನ ಫಲ ಕೊಟ್ಟಿರಲಿಲ್ಲ.
ಈ ಮಧ್ಯೆ, ಕೊನೆಗಳಿಗೆಯಲ್ಲಿ ಪಟ್ಟಿ ಬದಲಾವಣೆಯಾಗಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಹರಡಿತ್ತು. ಕೆ.ಪಿ. ನಂಜುಂಡಿ ಬದಲು ತಿಗಳರ ಸಮುದಾಯಕ್ಕೆ ಸೇರಿರುವ, ಬೆಂಗಳೂರಿನ ಮಾಜಿ ಮೇಯರ್ ಪಿ.ಆರ್. ರಮೇಶ್ ಹೆಸರು ಪರಿಶೀಲನೆಯಲ್ಲಿದೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕೆ.ಪಿ. ನಂಜುಂಡಿ, ‘ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕ ಮಾಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ದ್ರೋಹ ಮಾಡಿದ್ದಾರೆ. ಪ್ರತಿ ಮನೆಮನೆಗೂ ಹೋಗಿ ಅವರು ಮಾಡಿದ ದ್ರೋಹ ವಿವರಿಸುತ್ತೇನೆ. ಇದನ್ನು ಇಷ್ಟಕ್ಕೇ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ನಂಜುಂಡಿ ಆತ್ಮೀಯರಾಗಿದ್ದರು. ಇತ್ತೀಚೆಗೆ ಅವರ ಸಂಬಂಧ ಹದಗೆಟ್ಟಿತ್ತು. ಇದರಿಂದ ನಂಜುಂಡಿ ಹೆಸರಿಗೆ ಕತ್ತರಿ ಬಿದ್ದಿದೆ’ ಎಂದೂ ಕಾಂಗ್ರೆಸ್ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.