ಬೆಂಗಳೂರು: ರಾಜ್ಯದಾದ್ಯಂತ ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಆರಂಭವಾಗಿದ್ದು, ಕರಾವಳಿ, ಮಲೆನಾಡು ಪ್ರದೇಶದಲ್ಲಿ ರಭಸವಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಸೋಮವಾರ ಸಾಧಾರಣ ಮಳೆಯಾಗಿದೆ. ನಗರದಲ್ಲಿ ಮುಂಜಾನೆ 5ಗಂಟೆಯಿಂದ 10 ಗಂಟೆಯವರೆಗೂ ನಿರಂತರವಾಗಿ ಮಳೆ ಸುರಿದಿದೆ.
ಭದ್ರಾವತಿ, ಶಿಕಾರಿಪುರ, ಸಾಗರ, ಕಾರ್ಗಲ್, ಹೊಸನಗರ, ಆಗುಂಬೆ, ಸೊರಬ ಭಾಗಗಳಲ್ಲಿಯೂ ಸಾಧಾರಣ ಮಳೆಯಾಗಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಇರುವುದರಿಂದ ಜಲಾಶಯದ ಒಳಹರಿವು 9,482 ಕ್ಯುಸೆಕ್ಗೆ ಇಳಿಕೆಯಾಗಿದೆ. 1,342 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಧಾರಾಕಾರ ಮಳೆಯಾಗಿದೆ. ಮಡಿಕೇರಿಯಲ್ಲಿ ದಟ್ಟಮಂಜಿನ ನಡುವೆ ನಿರಂತರವಾಗಿ ಮಳೆ ಸುರಿಯಿತು. 15 ದಿನಗಳಿಂದ ಕಾಣೆಯಾಗಿದ್ದ ಮುಂಗಾರು ಮಳೆ ಮತ್ತೆ ಆರ್ಭಟಿಸಿದೆ. ಪಶ್ಚಿಮಘಟ್ಟದ ತಪ್ಪಲಲ್ಲಿರುವ ತಲಕಾವೇರಿ, ಭಾಗಮಂಡಲ, ಸಂಪಾಜೆ ಯಲ್ಲಿ ಬಿರುಸಿನಿಂದ ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಸದ್ಯಕ್ಕೆ ನೀರು ಸೇತುವೆಯಿಂದ ಕೆಳಗೆ ಹರಿಯು ತ್ತಿದೆ. ವಾಹನಗಳ ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲ.
ಪೊನ್ನಂಪೇಟೆ, ಶಾಂತಳ್ಳಿ, ಶ್ರೀಮಂಗಲ ಪ್ರದೇಶದಲ್ಲಿ ಗಾಳಿಸಹಿತ ಮಳೆ ಸುರಿದಿದೆ. ಮಡಿಕೇರಿ 2.6 ಸೆಂ.ಮೀ, ಸಂಪಾಜೆಯಲ್ಲಿ 3.6 ಸೆಂ.ಮೀ, ಭಾಗಮಂಡಲದಲ್ಲಿ 3.6 ಸೆಂ.ಮೀ, ಮಳೆಯಾಗಿದೆ.
ಸಾಧಾರಣ ಮಳೆ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಮಳೆ ಮುಂದುವರಿದಿದ್ದು, ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.