ADVERTISEMENT

ಶಿವಮೊಗ್ಗ ರಂಗಾಯಣಕ್ಕೆ ಇಕ್ಬಾಲ್‌ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 19:30 IST
Last Updated 23 ನವೆಂಬರ್ 2014, 19:30 IST
ಇಕ್ಬಾಲ್‌ ಅಹ್ಮದ್‌
ಇಕ್ಬಾಲ್‌ ಅಹ್ಮದ್‌   

ಶಿವಮೊಗ್ಗ: ಬಹು ದಿನಗಳಿಂದ ಖಾಲಿ ಇದ್ದ ಶಿವಮೊಗ್ಗ ರಂಗಾಯಣ ನಿರ್ದೇ ಶಕರ ಸ್ಥಾನಕ್ಕೆ ಜಿಲ್ಲೆಯವರೇ ಆದ ರಂಗಕರ್ಮಿ ಇಕ್ಬಾಲ್‌ ಅಹ್ಮದ್‌ ಅವರನ್ನು  ಸರ್ಕಾರ ನೇಮಿಸಿದೆ.

ರಂಗಸಮಾಜವು ಸರ್ಕಾರಕ್ಕೆ ಮೂವರ ಹೆಸರು ಶಿಫಾರಸು ಮಾಡಿದ ವರ್ಷದ ನಂತರ ಈ ನೇಮಕ ಆದೇಶ ಹೊರಬಿದ್ದಿದೆ. ಈ ಹಿಂದೆ ನಿರ್ದೇಶಕ­ರಾಗಿದ್ದ ಹೊ.ನ.ಸತ್ಯ ರಾಜೀನಾಮೆ ನೀಡಿದ ನಂತರ ಈ ಸ್ಥಾನ ಖಾಲಿ ಉಳಿದಿತ್ತು.

ಮೂಲತಃ ಶಿಕಾರಿಪುರದ ಇಕ್ಬಾಲ್‌ ಅಹ್ಮದ್‌ ಅವರು ಅಲ್ಲೇ ‘ಗುಡಿ ಸಾಂಸ್ಕೃತಿಕ ಕೇಂದ್ರ’ ಸ್ಥಾಪಿಸಿ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿದ್ದರು. ಅವರು ಡಿಪ್ಲೊಮಾ ಇನ್‌ ಥಿಯೀಟರ್‌ ಆರ್ಟ್ ಬಿಎಸ್‌ಸಿ ಪದವೀಧರರು.

ನೀನಾಸಂನಲ್ಲಿ ಏಳು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ವಿ.ಕಾರಂತರ ಜತೆ ಎರಡು ವರ್ಷ, ಮೈಸೂರಿನ ರಂಗಾ ಯಣದಲ್ಲಿ ಐದು ವರ್ಷ ರಂಗ ವಿನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ನೀನಾಸಂ, ರಂಗಾಯಣ ಹಾಗೂ ಕರ್ನಾಟಕದ ಪ್ರಮುಖ ತಂಡಗಳಿಗೆ ನೂರಾರು ನಾಟಕ ನಿರ್ದೇಶನ ಮಾಡಿದ್ದಾರೆ. ಶಿಕಾರಿಪುರ­ದಲ್ಲಿರುವ ಗುಡಿ ಸಾಂಸ್ಕೃತಿಕ ಕೇಂದ್ರ ಒಂದು ಎಕರೆ ಪ್ರದೇಶದಲ್ಲಿದ್ದು, 400 ಪ್ರೇಕ್ಷಕರು ಕುಳಿತು ನೋಡುವ ಗ್ರೀಕ್‌ ಮಾದರಿಯ ಬಯಲು ರಂಗಮಂದಿರ ಹೊಂದಿದೆ.

‘ತಡವಾದರೂ ಸರ್ಕಾರ ನೇಮಕ ಆದೇಶ ಹೊರಡಿಸಿದೆ. ಆದೇಶ ತಲುಪಿದ ತಕ್ಷಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ತೆರಳಿ ವರದಿ ಮಾಡಿಕೊಳ್ಳ­ಲಾಗುವುದು’ ಎಂದು ಇಕ್ಬಾಲ್‌ ಅಹ್ಮದ್‌ ಪ್ರತಿಕ್ರಿಯಿಸಿದರು.

‘ಪ್ರಾಯೋಗಿಕ ರಂಗಭೂಮಿ, ಮಕ್ಕಳ ರಂಗಭೂಮಿ ಚಟುವಟಿಕೆಗೆ ಆದ್ಯತೆ ನೀಡಲಾಗುವುದು. ರಂಗಸಮಾಜದ ಜತೆ ಚರ್ಚಿಸಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.