ADVERTISEMENT

ಸನತ್‌ ಕುಮಾರ ಮನೆ ಮೇಲೆ ದಾಳಿ: ಪತ್ನಿಗೆ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 20:07 IST
Last Updated 22 ಜನವರಿ 2017, 20:07 IST

ಬೆಳಗಾವಿ: ‘ಇಲ್ಲಿನ ಹಿಂದವಾಡಿಯಲ್ಲಿರುವ ಗೊಮಟೇಶ ವಿದ್ಯಾಪೀಠದ ನಿರ್ದೇಶಕ ವಿ.ವಿ. ಸನತ್‌ ಕುಮಾರ್ ಅವರ ಮನೆ ಮೇಲೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ 20ಕ್ಕೂ ಹೆಚ್ಚು ಮಂದಿಯ ತಂಡ ಭಾನುವಾರ ದಾಳಿ ನಡೆಸಿ, ಕಿಟಕಿ ಗಾಜುಗಳನ್ನು ಒಡೆದು ಹಾಕಿದೆ’ ಎಂದು ಆರೋಪಿಸಿ ಇಲ್ಲಿನ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ.ಪಿ.ಸಿ.ಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ ಅವರ ಗನ್‌ಮ್ಯಾನ್‌ ಎನ್ನಲಾದ ಪ್ರಣಯ್ ಶೆಟ್ಟಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ವಿರುದ್ಧ ದೂರು ದಾಖಲಾಗಿದೆ.

‘ಸನತ್‌ ಕುಮಾರ ಅವರು ಬಿಜೆಪಿ ಶಾಸಕ ಸಂಜಯ ಪಾಟೀಲ ಅವರ ಆಪ್ತರಾಗಿದ್ದಾರೆ. ಈಚೆಗೆ ಲಕ್ಷ್ಮಿ ಹೆಬ್ಬಾಳಕರ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಸನತ್‌ ಕುಮಾರ್‌ ಅವರೇ ಕಾರಣ ಎಂದು ಭಾವಿಸಿ ದಾಳಿ ನಡೆಸಲಾಗಿದೆ. ಸನತ್‌ ಕುಮಾರ ಅವರು ಮನೆಯಲ್ಲಿ ಇರಲಿಲ್ಲ. ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಆರೋಪಿಗಳು, ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಅವರ ಪತ್ನಿ ಭಾಗ್ಯಶ್ರೀ ಅವರಿಗೆ ಪ್ರಾಣಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಲಾಗಿದೆ.

ADVERTISEMENT

‘ಸನತ್‌ ಕುಮಾರ  ನೀಡಿದ ದೂರಿನ ಮೇರೆಗೆ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.