ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿರುವ ಬೇಜವಾಡಾ ವಿಲ್ಸನ್ 1966ರಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ದಲಿತ ಕುಟುಂಬದಲ್ಲಿ ಜನಿಸಿದರು. ಸಫಾಯಿ ಕರ್ಮಚಾರಿಗಳ ಪರವಾಗಿ, ಅವರ ಹಕ್ಕುಗಳನ್ನು ಸಂರಕ್ಷಿಸುತ್ತಾ ವಿಲ್ಸನ್ ಆಂದೋಲನ ಮಾಡುತ್ತಿದ್ದಾರೆ.
ಏನಿದು ಸಫಾಯಿ ಕರ್ಮಚಾರಿ ಆಂದೋಲನ?
ಮಲ ಹೊರುವ ಪದ್ಧತಿ ಮತ್ತು ಜಾತಿ ಆಧಾರಿತ ವರ್ಗೀಕರಣ ಮಾಡಿ ಮೇಲು ಕೀಳೆಂಬ ಭೇದಭಾವ ತೋರುವ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವುದೇ ಈ ಆಂದೋಲದ ಧ್ಯೇಯ. ವಿಲ್ಸನ್ ಅವರು 1986ರಲ್ಲಿ ಮಲ ಹೊರುವ ಪದ್ಧತಿಯ ವಿರುದ್ದ ಹೋರಾಟವನ್ನು ಆರಂಭಿಸಿದಾಗ ಅವರ ಮನೆಯಲ್ಲಿಯೇ ಇದಕ್ಕೆ ವಿರೋಧ ಎದುರಿಸಬೇಕಾಗಿ ಬಂತು. ಆದರೆ ಒಂದೇ ವರ್ಷದಲ್ಲಿ ಮನೆಯವರಿಗೆ ಈ ಹೋರಾಟದ ಬಗ್ಗೆ ಮನವರಿಕೆಯಾಗಿ ಅವರೂ ವಿಲ್ಸನ್ ಹೋರಾಟಕ್ಕೆ ಸಾಥ್ ನೀಡಿದರು.
ಹೋರಾಟ ಆರಂಭವಾಗಿದ್ದು ಹೇಗೆ?
ಕೋಲಾರದಲ್ಲಿ ಮಲಹೊರುವ ಪದ್ಧತಿ ಹಾಸುಹೊಕ್ಕಾಗಿದ್ದರೂ, ಯಾರೊಬ್ಬರೂ ಈ ಬಗ್ಗೆ ಮೌನ ಮುರಿದಿರಲಿಲ್ಲ. ಮಲಹೊರುವ ಪದ್ಧತಿ ಇದೆ ಎಂಬುದನ್ನೇ ಒಪ್ಪಲು ತಯಾರಾಗದೇ ಇದ್ದ ಕಾಲದಲ್ಲಿ ವಿಲ್ಸನ್ ಆ ಬಗ್ಗೆ ದನಿಯೆತ್ತಿದರು. ಈ ಬಗ್ಗೆ ಕೆಜಿಎಫ್ ಅಧಿಕಾರಿಗಳಿಗೆ, ರಾಜ್ಯ ಸಚಿವರಿಗೆ, ಮುಖ್ಯಮಂತ್ರಿಗಳಿಗೆ, ಪ್ರಧಾನ ಮಂತ್ರಿಗೆ ಮತ್ತು ಪತ್ರಿಕೆಗಳಿಗೆ ಪತ್ರ ಬರೆದು ಈ ಅನಿಷ್ಟ ಪದ್ಧತಿಯ ವಿರುದ್ಧ ಅಭಿಯಾನ ಆರಂಭಿಸಿದರು.
1993ರಲ್ಲಿ ಕೇಂದ್ರ ಸರಕಾರ ಮಲಹೊರುವ ಪದ್ದತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಈ ಪದ್ಧತಿ ಮುಂದುವರಿಯುತ್ತಲೇ ಇತ್ತು. ಹೀಗಿರುವಾಗ ಕೆಜಿಎಫ್ ನಲ್ಲಿ ಮಲಹೊರುವ ಕಾರ್ಮಿಕರ ಫೋಟೋ ತೆಗೆದು ವಿಲ್ಸನ್ ಅದನ್ನು ಅಧಿಕಾರಿಗಳಿಗೆ ಕಳಿಸಿಕೊಟ್ಟು, ಮಲಹೊರುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದರು. ಎರಡು ವರ್ಷಗಳ ಕಾಲ ಕರ್ನಾಟಕದಲ್ಲಿ ಮಲಹೊರುವ ಪದ್ಧತಿಯ ವಿರುದ್ಧ ಹೋರಾಡಿದ ವಿಲ್ಸನ್ ಆಮೇಲೆ ಆಂಧ್ರದಲ್ಲಿ ನೆಲೆಯೂರಿದರು.
ಅಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪೌಲ್ ದಿವಾಕರ್, ಎಸ್ ಆರ್ ಶಂಕರ್ ಅವರ ಜತೆ ಸೇರಿದ ವಿಲ್ಸನ್ 1994ರಲ್ಲಿ ಸಫಾಯಿ ಕರ್ಮಚಾರಿ ಆಂದೋಲನಕ್ಕೆ ಚುಕ್ಕಾಣಿ ಹಿಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.