ADVERTISEMENT

ಸಮುದ್ರ ಪಾಲಾಗುತ್ತಿದ್ದ ಬೆಂಗಳೂರಿನ 7 ಮಂದಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:50 IST
Last Updated 23 ಮೇ 2017, 19:50 IST
ಉಳ್ಳಾಲ (ದಕ್ಷಿಣ ಕನ್ನಡ ಜಿಲ್ಲೆ): ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಆನೆಪಾಳ್ಯದ ಒಂದೇ ಕುಟುಂಬದ ಏಳು ಜನರನ್ನು ಮೊಗವೀರ ಈಜುಗಾರರು ಮಂಗಳವಾರ ಇಲ್ಲಿನ ಮೊಗವೀರಪಟ್ನದಲ್ಲಿ ರಕ್ಷಿಸಿದ್ದಾರೆ.
 
ಗಂಭೀರ ಸ್ಥಿತಿಯಲ್ಲಿದ್ದ ಮೂವರು ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಆನೆಪಾಳ್ಯ ನಿವಾಸಿಗಳಾದ ರೆಹೆಮಾನ್ ಶರೀಫ್ (27) ಅವರ ಪತ್ನಿ ಯಾಸ್ಮಿನ್ ತಾಜ್  (22), ತಸ್ಮಿಯಾ ತಾಜ್ (16) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು.
 
ರೆಹೆಮಾನ್ ಶರೀಫ್ ಸೇರಿದಂತೆ ಸುಮಾರು 9 ಜನರ ತಂಡ ಬೆಳಿಗ್ಗೆ ಉಳ್ಳಾಲ ದರ್ಗಾ ವೀಕ್ಷಣೆಗೆಂದು ಬಂದಿತ್ತು. ಮಧ್ಯಾಹ್ನದ ವೇಳೆಗೆ ಎಲ್ಲರೂ ಉಳ್ಳಾಲ ಮೊಗವೀರಪಟ್ನದ  ಬೀಚ್‌ಗೆ ಬಂದಿದ್ದು, ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದರು. ಆಗ ಇಬ್ಬರು ಮಕ್ಕಳು ಅಲೆಗೆ ಸಿಲುಕಿದ್ದು, ಅವರನ್ನು ರಕ್ಷಿಸಲು ತೆರಳಿದ ಕುಟುಂಬದ ಇತರ ಸದಸ್ಯರು ಸಮುದ್ರ ಪಾಲಾದರು. 
 
ಸಮುದ್ರ ಪಾಲಾಗುತ್ತಿದ್ದವರ ಕೂಗು ಕೇಳಿದ ಪ್ರವೀಣ್ ಕೋಟ್ಯಾನ್, ಸದಾನಂದ ಬಂಗೇರ, ವಸಂತ್ ಪುತ್ರನ್, ನಮಿತ್ ಅಮೀನ್, ಕುನಾಲ್ ಅಮೀನ್, ಹೋಮ್ ಗಾರ್ಡ್ ನಿತಿನ್ ಅವರು ಸಮುದ್ರಕ್ಕೆ ಹಾರಿ ಅಪಾಯದಲ್ಲಿದ್ದವರನ್ನು ರಕ್ಷಿಸಿದರು.
 
ನಾಲ್ವರು ಸದಸ್ಯರಿಗೆ ಪ್ರಾರ್ಥಮಿಕ ಚಿಕಿತ್ಸೆ ನೀಡಿದ ಈಜುಗಾರರು, ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿದರು. ಉಳ್ಳಾಲ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.