ADVERTISEMENT

ಸುಡಾನ್‌: ಗಂಗಾವತಿ ಯುವಕ ಗುಂಡಿಗೆ ಬಲಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ಸೈಯದ್
ಸೈಯದ್   

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿಯ ಯುವಕ ಸೈಯದ್ ಫಾರೂಕ್ ಪಾಷಾ (32) ದರೋಡೆಕೋರರ ಗುಂಡಿಗೆ ಬಲಿಯಾದ ಘಟನೆ ದಕ್ಷಿಣ ಸುಡಾನ್ ದೇಶದ ಉವಾ ನಗರದಲ್ಲಿ ಶುಕ್ರವಾರ ನಡೆದಿದೆ.

ಶಾಸಕ ಇಕ್ಬಾಲ್ ಅನ್ಸಾರಿ ಅವರ ಆಪ್ತ, ಜೆಡಿಎಸ್ ಮುಖಂಡ ಎಸ್.ಬಿ. ಖಾದ್ರಿ ಅವರ ಎರಡನೇ ಪುತ್ರ ಸೈಯದ್ ಫಾರೂಕ್, ಅಲ್ಲಿನ ಜಮಾಸ್ಕಿ ಇನ್ಫ್ರಾಟೆಕ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದರು.

‘ಉವಾ ನಗರದ ಮಸೀದಿಯಲ್ಲಿ ಶುಕ್ರವಾರ ನಮಾಜ್ ಮುಗಿಸಿ ಹೊರಟ್ಟಿದ್ದರು. ಹೊರವಲಯದಲ್ಲಿ ದರೋಡೆಕೋರರು ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚಾಲಕ ಕಾರು ನಿಲ್ಲಿಸದೆ ಹೋಗಿದ್ದು, ದರೋಡೆಕೋರರು ಗುಂಡು ಹಾರಿಸಿದ್ದರಿಂದ ಸೈಯದ್‌ ಪಾರೂಕ್  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಘಟನೆಯಲ್ಲಿ ಭಾರತ ಮೂಲದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಪಾರ್ಥಿವ ಶರೀರವನ್ನು ಸುಡಾನ್ ದೇಶದ ಯುನಿಸಾ ಸೇನಾ ಶಿಬಿರದಲ್ಲಿ ಇರಿಸಲಾಗಿದೆ.

‘ಮೃತದೇಹವನ್ನು ಸ್ವದೇಶಕ್ಕೆ ತರಲು ನೆರವು ನೀಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೋರಿದ್ದು, ಅವರು ಸ್ಪಂದಿಸಿದ್ದಾರೆ.

ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹ ಬರಲಿದೆ. ನಮ್ಮ ಕುಟುಂಬದವರು ಇರುವ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಎಸ್.ಬಿ. ಖಾದ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.