ADVERTISEMENT

ಸ್ಥಳೀಯ ನಾಯಕರ ಜೊತೆ ವೇಣು ಹೆಜ್ಜೆ

ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಚುರುಕು ಮುಟ್ಟಿಸಲು ರಾಜ್ಯ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಸ್ಥಳೀಯ ನಾಯಕರ ಜೊತೆಗೂಡಿ ಎಲ್ಲ ಜಿಲ್ಲೆಗಳಲ್ಲಿ ಸುತ್ತಾಡಲು ತೀರ್ಮಾನಿಸಿದ್ದಾರೆ.

ಮತದಾರರನ್ನು ಸೆಳೆಯಲು ಬಿಜೆಪಿ ರೂಪಿಸಿರುವ ‘ವಿಸ್ತಾರಕ್‌’ ಅಭಿಯಾನಕ್ಕೆ ಪರ್ಯಾಯವಾಗಿ ಕೆಪಿಸಿಸಿ ಆರಂಭಿಸಿರುವ ‘ಮನೆ ಮನೆಗೆ ಕಾಂಗ್ರೆಸ್‌’ ಅಭಿಯಾನದಲ್ಲಿ ಮೂರು ದಿನಗಳಿಂದ ಕೈ ಜೋಡಿಸಿರುವ ವೇಣುಗೋಪಾಲ್‌, ದಾವಣಗೆರೆ ಜಿಲ್ಲೆಯ ಹಲವು ಮನೆಗಳಿಗೆ ಮಂಗಳವಾರ ತೆರಳಿದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ರಾಜ್ಯ ನಾಯಕರ ಅನುಪಸ್ಥಿತಿಯಲ್ಲಿ ಒಬ್ಬಂಟಿಯಾಗಿ ಮತದಾರರ ಮನೆಗಳಿಗೆ ಎಡತಾಕುವುದರಲ್ಲಿ ನಿರತರಾದ ಅವರು, ‘ಪ್ರಜಾವಾಣಿ’ ಜೊತೆ ದೂರವಾಣಿಯಲ್ಲಿ ಅನುಭವ ಹಂಚಿಕೊಂಡರು.

ADVERTISEMENT

‘ನಾನು ಪಕ್ಷದ ರಾಜ್ಯ ಉಸ್ತುವಾರಿಯಾಗಿ ಬಂದ ದಿನದಿಂದ ಕೇಡರ್‌ ಮಾದರಿಯಲ್ಲಿ ಪಕ್ಷ ಸಂಘಟಿಸಲು ಹೊರಟಿದ್ದೇನೆ. ರಾಜ್ಯ ಸರ್ಕಾರದ ಸಾಧನೆಗಳು ಮತದಾರರ ಮನೆಗೆ ತಲುಪಿದರೆ ಅವುಗಳು ಮತಗಳಾಗಿ ಬದಲಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ನಾಯಕರಿಗೆ ಹೆಚ್ಚಿನ ಹೊಣೆಗಾರಿಕೆ ಇದೆ. ಅವರನ್ನು ಎಚ್ಚರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಸುತ್ತಾಡಲು ನಿರ್ಧರಿಸಿದ್ದೇನೆ’ ಎಂದರು.

‘ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನ ಪಕ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಜ್ಯಮಟ್ಟದ ನಾಯಕರವರೆಗೆ ಎಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಈ ಬಗ್ಗೆ ಈಗಾಗಲೇ ಪಕ್ಷದ ಸಭೆಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ಸೂಚನೆ ಪಾಲಿಸದ ಪದಾಧಿಕಾರಿಗಳನ್ನು ಬದಲಿಸಿ, ಆ ಜಾಗಕ್ಕೆ ಹೊಸಬರನ್ನು ನೇಮಿಸಿ ಹೊಣೆಗಾರಿಕೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕ್ರಮವನ್ನೂ ತೆಗೆದುಕೊಂಡಿದ್ದೇನೆ. ಈ ಅಭಿಯಾನ ಯಶಸ್ವಿಯಾಗಿ, ಮುಂದಿನ ಚುನಾವಣೆಯಲ್ಲಿ ಫಲ ನೀಡಬೇಕು ಎನ್ನುವುದಷ್ಟೆ ನನ್ನ ಗುರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.