ADVERTISEMENT

ಹಲವೆಡೆ ಭರಣಿ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಚಿಕ್ಕಮಗಳೂರು ನಗರದಲ್ಲಿ ಗುರುವಾರ ಮಳೆ ಆರ್ಭಟಿಸಿದಾಗ ಬಸವನಹಳ್ಳಿ ರಸ್ತೆಯಲ್ಲಿ ಯುವತಿಯರು ಓಡಿದರು
ಚಿಕ್ಕಮಗಳೂರು ನಗರದಲ್ಲಿ ಗುರುವಾರ ಮಳೆ ಆರ್ಭಟಿಸಿದಾಗ ಬಸವನಹಳ್ಳಿ ರಸ್ತೆಯಲ್ಲಿ ಯುವತಿಯರು ಓಡಿದರು   

ಬೆಂಗಳೂರು:  ರಾಜ್ಯದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ  ಹಾಗೂ ಬಳ್ಳಾರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುರುವಾರ ಆಲಿಕಲ್ಲು ಸಹಿತ ಮಳೆಯಾಗಿದೆ.

ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಂಜೆ ಗುಡುಗು ಸಹಿತ ಭರಣಿ ಮಳೆ ಆರ್ಭಟಿಸಿತು.ಸಂಜೆ ಸುಮಾರು 4 ಗಂಟೆಗೆ ಶುರುವಾದ ಮಳೆ ಸಂಜೆ 5.20ರವರೆಗೂ  ಸುರಿಯಿತು. ಈ ವರ್ಷದಲ್ಲಿ ಒಮ್ಮೆಯೂ ಹದ ಮಳೆ ನೋಡದಿದ್ದ ಲಕ್ಯಾ, ಅಂಬಳೆ ಹೋಬಳಿ ಸುತ್ತಮುತ್ತವೂ ಸಂಜೆ ಮೊದಲ ಮಳೆಯ ಸ್ಪರ್ಶವಾಗಿದೆ.

ಸಿಡಿಲು ಬಡಿದು ಜೋಡೆತ್ತು ಸಾವು: ಕಡೂರು ತಾಲ್ಲೂಕಿನ ಎಸ್.ಬಿದರೆ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ದುಬಾರಿ ಬೆಲೆಯ ಜೋಡೆತ್ತುಗಳು ಮೃತಪಟ್ಟಿವೆ.

ADVERTISEMENT

ಧಾರಾಕಾರ ಮಳೆ:  ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಮಡಿಕೇರಿ, ಸಿದ್ದಾಪುರ, ನಾಪೋಕ್ಲು, ವಿರಾಜಪೇಟೆ, ಸುಂಟಿಕೊಪ್ಪ, ಭಾಗಮಂಡಲದಲ್ಲಿ 20 ನಿಮಿಷ ಕಾಲ ಮಳೆ ಆರ್ಭಟಿಸಿತು.

ಗುಡುಗು ಸಹಿತ ಮಳೆ: ಶಿವಮೊಗ ನಗರದ ಕೆಲವೆಡೆ ಗುರುವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಿತು. ವಿನೋಬ ನಗರದಲ್ಲಿ ಮರ ಧರೆಗೆ ಉರುಳಿದ ಪರಿಣಾಮ ಕೆಲ ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ರಾಜೇಂದ್ರನಗರದಲ್ಲಿ ಸಿಡಿಲು ಬಡಿದು ಮರಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕೆಲವೆಡೆ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ದಾವಣಗೆರೆ ಜಿಲ್ಲೆ ನ್ಯಾಮತಿಯಲ್ಲಿ ಆಲಿಕಲ್ಲು ಮಳೆ ಸುರಿಯಿತು.

ಆಲಿಕಲ್ಲು ಮಳೆ: ಚಿತ್ರದುರ್ಗದ ಭೀಮಸಮುದ್ರದಲ್ಲಿ ಗುರುವಾರ ಮಧ್ಯಾಹ್ನ ಮುಕ್ಕಾಲು ತಾಸು ಆಲಿಕಲ್ಲು ಮಳೆ ಸುರಿಯಿತು. ಸಿರಿಗೆರೆಯಲ್ಲೂ ಭೂಮಿ ತೋಯುವಷ್ಟು ಮಳೆ ಸುರಿಯಿತು.

ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ
ಬೆಂಗಳೂರು:
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.

ಬಳ್ಳಾರಿಯಲ್ಲಿ 42 ಡಿಗ್ರಿ ಸೆಲ್ಸಿಯಸ್‌ನಷ್ಟು  ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ:  ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.