ಬೆಂಗಳೂರು: ‘ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಯಾವುದೇ ತನಿಖಾ ಸಂಸ್ಥೆಯೂ ಆರೋಪಪಟ್ಟಿ ಸಲ್ಲಿಸಿಲ್ಲ. ಒಂದು ವೇಳೆ ಆರೋಪಪಟ್ಟಿಯ ದಾಖಲೆ ಎಸ್.ಆರ್.ಹಿರೇಮಠರ ಬಳಿ ಇದ್ದರೆ ಅದನ್ನು ಹಾಜರುಪಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರದೇಶ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅವರ ಸಂಪುಟ ಸೇರ್ಪಡೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ, ‘ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಸಚಿವ ಸ್ಥಾನ ನೀಡಲಾಗಿದೆ’ ಎಂದರು.
ಶಿವಕುಮಾರ್ ವಿರುದ್ಧದ ದಾಖಲೆಗಳನ್ನು ಹಿರೇಮಠರು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ‘ಆರೋಪಪಟ್ಟಿ ಸಲ್ಲಿಕೆಯಾಗದೆ ಸುಮ್ಮನೆ ಆರೋಪ ಮಾಡಲಾಗದು’ ಎಂದರು.
‘ಶಿವಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಥಮ ವರ್ತಮಾನ ವರದಿಗೆ (ಎಫ್ಐಆರ್) ಹೈಕೋರ್ಟ್ ತಡೆಯಾಜ್ಞೆ ಇದೆ. ರೋಷನ್ ಬೇಗ್ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿರುವುದು ನಿಜ. ಆದರೆ, ಆ ಪ್ರಕರಣದ ತನಿಖೆಯೂ ಮುಗಿದಿಲ್ಲ, ಆರೋಪಪಟ್ಟಿಯೂ ಸಲ್ಲಿಕೆಯಾಗಿಲ್ಲ. ಹೀಗಿರುವಾಗ ಇಬ್ಬರನ್ನೂ ದೋಷಿಗಳು ಎಂದು ತೀರ್ಮಾನಿಸಲು ಸಾಧ್ಯವಿಲ್ಲ’ ಎಂದರು.
‘ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಆರ್.ಅಶೋಕ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಲೋಕಾಯುಕ್ತ ದಾಳಿಯೂ ನಡೆದಿತ್ತು. ಆದರೂ, ಅವರು ಸಂಪುಟದಲ್ಲಿ ಮುಂದುವರಿದಿದ್ದರು. ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಕೆಲವರು ಸಂಪುಟದಲ್ಲಿದ್ದರು. ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದರು’ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು.
ಲಾಡ್ ಸ್ವಇಚ್ಛೆಯಿಂದ ರಾಜೀನಾಮೆ: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪವಿದೆ ಎಂಬ ಕಾರಣಕ್ಕೆ ಸಂತೋಷ್ ಲಾಡ್ ಅವರಿಂದ ರಾಜೀನಾಮೆ ಪಡೆದು, ಈಗ ಅಂಥದೇ ಆರೋಪವಿರುವವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದಾಗ, ‘ಲಾಡ್ ಅವರಿಂದ ನಾನು ರಾಜೀನಾಮೆ ಪಡೆದಿಲ್ಲ. ಅವರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದರು’ ಎಂದು ಮುಖ್ಯಮಂತ್ರಿ ಹೇಳಿದರು.
ಇಬ್ಬರು ಸಚಿವರ ಸೇರ್ಪಡೆಯಿಂದ ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಆಗಿಲ್ಲ. ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣಗಳಿಗೂ, ತಮ್ಮ ಸರ್ಕಾರದ ಸಚಿವರ ವಿರುದ್ಧದ ಆರೋಪಗಳಿಗೂ ವ್ಯತ್ಯಾಸವಿದೆ ಎಂದರು.
‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಲವು ಸಚಿವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಅವರನ್ನು ಅಧಿಕಾರದಲ್ಲಿ ಮುಂದುವರಿಸಲಾಗಿತ್ತು. ನಾವು ಆ ರೀತಿ ಮಾಡುವುದಿಲ್ಲ’ ಎಂದು ದಿಗ್ವಿಜಯ್ ಹೇಳಿದರು.
ಸಂಪುಟ ರಚನೆ ಮುಖ್ಯಮಂತ್ರಿ ಪರಮಾಧಿಕಾರ. ಅವರ ಆಯ್ಕೆಯ ಪ್ರಕಾರವೇ ಸಂಪುಟದ ಸದಸ್ಯರನ್ನು ನೇಮಕ ಮಾಡಲು ಅವಕಾಶವಿದೆ. ಶಿವಕುಮಾರ್ ಮತ್ತು ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನೂ ಅವರೇ ಕೈಗೊಂಡಿದ್ದಾರೆ ಎಂದರು.
ಕೋರ್ಟ್ ಹೇಳಿದರಷ್ಟೇ ದೋಷಿ
ಹಿರೇಮಠರು ಆರೋಪಪಟ್ಟಿ ಹಾಜರುಪಡಿಸಿದರೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಅವರು ದಾಖಲೆ ಹಾಜರುಪಡಿಸಲಿ. ಆರೋಪಪಟ್ಟಿ ಇದ್ದರೂ, ದೋಷಿ ಎನ್ನಲಾಗದು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗಬೇಕಾಗುತ್ತದೆ’ ಎಂದರು.
ಪರಿಶೀಲಿಸಿಯೇ ಸ್ಥಾನ
‘ರೋಷನ್ ಬೇಗ್ ಮತ್ತು ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ ಎಂಬುದು ಖಚಿತವಾದ ಬಳಿಕವೇ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ’ ಎಂದು ದಿಗ್ವಿಜಯ್ ಸಿಂಗ್ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.