ADVERTISEMENT

ಹೇಳಿಕೆ ವಾಪಸ್ ಪಡೆದ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2015, 19:30 IST
Last Updated 16 ಸೆಪ್ಟೆಂಬರ್ 2015, 19:30 IST

ಶಿವಮೊಗ್ಗ: ‘ನನ್ನ ಭಾಷೆ ಸರಿಯಿಲ್ಲದಿರಬಹುದು; ಆದರೆ, ವಿಚಾರ ಸರಿಯಿಲ್ಲ ಎಂದು ಯಾರೂ ಹೇಳಿಲ್ಲ. ನನ್ನ ನಾಲಿಗೆ ಸರಿಯಿಲ್ಲ ನಿಜ. ಆದರೆ, ಹೇಳುವ ಅಂಶದಲ್ಲಿ ಯಾವುದೇ ತಪ್ಪಿಲ್ಲ. ನನಗೆ ಯಾವುದೇ ಪ್ರತಿಷ್ಠೆಯಿಲ್ಲ, ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರ ಮಕ್ಕಳ ವಿರುದ್ಧ ನೀಡಿರುವ ಹೇಳಿಕೆ ವಾಪಸ್ ಪಡೆಯುತ್ತೇನೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ತಮ್ಮ ಪುತ್ರ ಮರಳು ಅಕ್ರಮದಲ್ಲಿ ಭಾಗಿಯಾಗಿದ್ದರೆ ನೇಣು ಹಾಕುತ್ತೇನೆ ಎಂದಿದ್ದಾರೆ. ಅವರು ಹಾಗೆಲ್ಲಾ ಮಾಡಬಾರದು. ನಾನು ನನ್ನ ಭಾಷೆ ಸರಿಯಿಲ್ಲದಿದ್ದರೆ ಹೇಳಿಕೆ ವಾಪಸ್ ಪಡೆಯುತ್ತೇನೆ. ಸರ್ಕಾರದ ಪ್ರಮುಖರ ಪುತ್ರರೇ ಭಾಗಿಯಾಗಿರುವುದರಿಂದ ಅಕ್ರಮದಲ್ಲಿ ಪ್ರಭಾವಿಗಳ ಕೈವಾಡ ಇರಬಹುದು. ಸರ್ಕಾರ ಸಿಐಡಿ ತನಿಖೆ ನಡೆಸಲಿ’ ಎಂದು ಒತ್ತಾಯಿಸಿದರು.

ಕಾಮನ್‌ಸೆನ್ಸ್ ಇಲ್ಲ: ‘ಕಳಸಾ– ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸರ್ವ ಪಕ್ಷಗಳ ಮುಖಂಡರ ನಿಯೋಗ ಭೇಟಿ ಮಾಡಿ ಚರ್ಚಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಿ.ಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರೊಬ್ಬ ಕಾಮನ್‌ಸೆನ್ಸ್ ಇಲ್ಲದ ಸಿ.ಎಂ’ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.