ADVERTISEMENT

‘ಲಲಿತ ಪ್ರಬಂಧಗಳೆಡೆಗೆ ವಿಮರ್ಶಕರ ನಿರ್ಲಕ್ಷ್ಯ’

‘ಇಂದೂ ಕಾಡುವ ಅಂದಿನ ಕೃತಿ’ ವಿಷಯದ ಗೋಷ್ಠಿ

ಅಮಿತ್ ಎಂ.ಎಸ್.
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
‘ಇಂದೂ ಕಾಡುವ ಅಂದಿನ ಕೃತಿ’ ಗೋಷ್ಠಿಯಲ್ಲಿ ಮಾತನಾಡಿದ ಶೂದ್ರ ಶ್ರೀನಿವಾಸ. ವೆಂಕಟಗಿರಿ ದಳವಾಯಿ, ಬಸವರಾಜ ವಕ್ಕುಂದ, ಸಿರಾಜ ಅಹಮ್ಮದ್ ಹಾಗೂ ವಿಕ್ರಮ್‌ ವಿಸಾಜಿ ಭಾಗವಹಿಸಿದ್ದರು.
‘ಇಂದೂ ಕಾಡುವ ಅಂದಿನ ಕೃತಿ’ ಗೋಷ್ಠಿಯಲ್ಲಿ ಮಾತನಾಡಿದ ಶೂದ್ರ ಶ್ರೀನಿವಾಸ. ವೆಂಕಟಗಿರಿ ದಳವಾಯಿ, ಬಸವರಾಜ ವಕ್ಕುಂದ, ಸಿರಾಜ ಅಹಮ್ಮದ್ ಹಾಗೂ ವಿಕ್ರಮ್‌ ವಿಸಾಜಿ ಭಾಗವಹಿಸಿದ್ದರು.   

ಧಾರವಾಡ: ‘ಸಾಹಿತ್ಯದಲ್ಲಿಯೂ ಶ್ರೇಣೀಕರಣವಿದೆ. ಅದರ ಏಣಿಯ ಕೆಳಗೆ ಅನೇಕ ಪ್ರಕಾರಗಳು ಉಳಿದುಕೊಂಡಿವೆ. ಅದರಲ್ಲಿ ಲಲಿತ ಪ್ರಬಂಧವೂ ಒಂದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಸಾಹಿತ್ಯ ಸಂಭ್ರಮದ ‘ಇಂದೂ ಕಾಡುವ ಅಂದಿನ ಕೃತಿ’ ವಿಷಯದ ಗೋಷ್ಠಿಯಲ್ಲಿ ರಾಮಚಂದ್ರ ವೆಂಕಟೇಶ ಕುಲಕರ್ಣಿ (ರಾಕು) ಅವರ ‘ಗಾಳಿಪಟ’ ಪ್ರಬಂಧ ಕುರಿತು ಮಾತನಾಡಿದರು.

‘ಆಧುನಿಕ ಸಾಹಿತ್ಯದ ಎಲ್ಲಾ ಪ್ರಕಾರಗಳ ಮರುಓದು, ಚರ್ಚೆ, ಸಂವಾದ ಮತ್ತು ವಿಮರ್ಶೆಗಳಾಗಿವೆ. ಆದರೆ ಪ್ರಬಂಧಗಳ ಮರುಓದಿಗೆ ಅವಕಾಶ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಆಧುನಿಕ ಮತ್ತು ವಸಾಹತುಶಾಹಿ ಸಂದರ್ಭದಲ್ಲಿ ರಚಿತವಾದ ಲಲಿತ ಪ್ರಬಂಧಗಳು ಪದ್ಯ ಮತ್ತು ಗದ್ಯ ಎರಡನ್ನೂ ಒಳಗೊಂಡಿದ್ದವು. ಲಲಿತ ಪ್ರಬಂಧಗಳು ಊಳಿಗಮಾನ್ಯ, ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಗಳನ್ನು ಸ್ಪರ್ಶಿಸದೇ ನಗರ ಕೇಂದ್ರಿತವಾದ ಬದುಕಿನ ತೆಳುವಾದ ಸಮಸ್ಯೆಗಳನ್ನು ಇರಿಸಿಕೊಂಡು ವಿಸ್ತರಿಸಿವೆ ಎನ್ನುವ ಅಪವಾದವಿದೆ. ಆದರೆ ರಾಕು ಅವರ ಪ್ರಬಂಧಗಳು ಬದುಕಿಗೆ ಸಮೀಪವಾದ, ಬದುಕಿಗೆ ನೆರವಾಗುವ ಅನೇಕ ಸಂಗತಿಗಳನ್ನು ಒಳಗೊಂಡಿವೆ. ನವ್ಯದ ಪೂರ್ವದಲ್ಲಿ ಢಾಳಾಗಿ ಕಾಣಿಸಿಕೊಂಡ ಪ್ರಬಂಧಗಳು ನವ್ಯರಲ್ಲಿ ಅಷ್ಟಾಗಿ ಕಾಣಸಿಕೊಳ್ಳಲಿಲ್ಲ ಎಂಬ ಆರೋಪವೂ ಇದೆ. ರಾಕು ಅವರ ಪ್ರಬಂಧಗಳು ನವ್ಯರ ಕಾಲದಲ್ಲೂ ಪ್ರಮುಖ ಪಾತ್ರ ವಹಿಸಿವೆ’ ಎಂದರು.

‘ಉಗಿ ಬಂಡಿಯ ಓದು’ ಮತ್ತು ‘ನನ್ನ ತೋಟಗಾರಿಕೆ’, ‘ಆಯುಷ್ಕರ್ಮ’, ‘ಅಂಕ ಗಣಿತ’ ಪ್ರಬಂಧಗಳಲ್ಲಿ ಅವರು ಬದುಕಿನ ಸ್ವಾರಸ್ಯದೊಂದಿಗೆ ಹಾಗೂ ಗಂಭೀರ ಚಿಂತನೆಯನ್ನೂ ವಿವರಿಸಿದ್ದಾರೆ. ಅವರ ಲಲಿತ ಪ್ರಬಂಧಗಳಲ್ಲಿ ಸಂಸ್ಕೃತ ಮತ್ತು ಹಳಗನ್ನಡ ಪದ್ಯಗಳ ಮೂಲಕ ಕಾವ್ಯಮಯವೂ ಆಗಿರುತ್ತದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಕು ಅವರ ಲಲಿತ ಪ್ರಬಂಧಗಳಂತೆಯೇ ಹ.ಪಿ. ಜೋಶಿ ಅವರ ‘ಮಾವಿನತೋಪು’ ಕೃತಿಯೂ ನಿರ್ಲಕ್ಷ್ಯಕ್ಕೆ ಒಳಗಾದುದರ ಕುರಿತು ಬಸವರಾಜ ವಕ್ಕುಂದ ವಿಷಾದ ವ್ಯಕ್ತಪಡಿಸಿದರು.

‘ಈ ಕೃತಿಯ ಹೆಸರೂ ಮರೆತು ಹೋಗುವಷ್ಟು ಅದು ನಿರ್ಲಕ್ಷ್ಯಕ್ಕೀಡಾಗಿದೆ. ಇದೇ ಅವಧಿಯಲ್ಲಿ ಪ್ರಕಟಿತವಾದ ತೇಜಸ್ವಿ ಅವರ ‘ಸ್ವರೂಪ’, ಲಂಕೇಶರ ‘ಬಿರುಕು’ ಮತ್ತು ದೇವನೂರರ ‘ಒಡಲಾಳ’ ಕೃತಿಗಳಿಗೆ ದೊರೆತ ವಿಮರ್ಶೆಯ ಮಾನ್ಯತೆ ಈ ಕೃತಿಗೆ ಸಿಗಲಿಲ್ಲ. ಇದಕ್ಕೆ ಪಕ್ಷಪಾತವೊಂದೇ ಕಾರಣ ಎನ್ನಲಾಗದು. ಬದಲಾದ ಕನ್ನಡ ಸಾಹಿತ್ಯದಲ್ಲಿ ಸಂಭವಿಸಿದ ವಿಭಿನ್ನ ಆಸಕ್ತಿ ಮತ್ತು ಒಟ್ಟಾರೆ ಸಾಮಾಜಿಕ ಬದುಕಿನಲ್ಲಿ ಕಾಣಿಸಿಕೊಳ್ಳುತ್ತಿರುವ ಜೀವನಾಸಕ್ತಿಗಳೂ ಕಾರಣ’ ಎಂದು ಅವರು ವಿಶ್ಲೇಷಿಸಿದರು.

‘ಮಾವಿನತೋಪು’ ಮನುಷ್ಯನ ಮೂಲಭೂತ ಅಗತ್ಯಗಳಾದ ಅರ್ಥ–ಕಾಮಗಳ ನಿಯಂತ್ರಣ, ನಿರ್ದೇಶನವನ್ನು ಹಾಗೂ ವ್ಯಕ್ತಿ ಮತ್ತು ಕುಟುಂಬಗಳು ಸಾಮಾಜಿಕ ನೆಲೆಗಳಲ್ಲಿ ಎಂತಹ ಬಿಕ್ಕಟ್ಟುಗಳನ್ನು ಸೃಷ್ಟಿಸಿವೆ ಎಂಬುದನ್ನು ವಾಸ್ತವವಾದಿ ನೆಲೆಯಲ್ಲಿ ಕಟ್ಟಿಕೊಡುತ್ತದೆ’ ಎಂದು ಅವರು ವ್ಯಾಖ್ಯಾನಿಸಿದರು.

ಲಾವಣಿಕಾರ ಖಾಜಾಭಾಯಿಯ ಬದುಕನ್ನು ಚಿತ್ರಿಸಿರುವ ಮಧುರ ಚೆನ್ನ ಅವರ ‘ರಮ್ಯ ಜೀವನ’ದ ಕುರಿತು ಅಭಿಪ್ರಾಯ ಮಂಡಿಸಿದವರು ಕವಿ, ವಿಮರ್ಶಕ ವಿಕ್ರಮ ವಿಸಾಜಿ.

‘ಕ್ಲಿಷ್ಟವಿಲ್ಲದ ಗದ್ಯದಲ್ಲಿ ಆಳವಾದ ಗಂಭೀರ ಸಂಗತಿಗಳನ್ನು ಮಧುರ ಚೆನ್ನ ಚರ್ಚಿಸಿದ್ದಾರೆ. ಅದರಲ್ಲಿ ಖಾಜಾಬಾಯಿಯ ಕಾವ್ಯ ವ್ಯಕ್ತಿತ್ವ, ಅವರ ಕಾವ್ಯ ಸೃಷ್ಟಿಯ ಕ್ರಮಗಳು, ಅಂದಿನ ಲಾವಣಿ ಸಂಪ್ರದಾಯದ ಪರಂಪರೆ, ವಿಸಂಗತಿ, ಕಾವ್ಯದ ಪರಿಣಾಮಗಳು ಮತ್ತು ಕಾವ್ಯ ಹಾಗೂ ಕವಿಯ ವ್ಯಕ್ತಿತ್ವಕ್ಕೂ ಇರುವ ಸಂಬಂಧಗಳನ್ನು ಗಾಢವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಮಧುರ ಚೆನ್ನ ಅವರಿಗೆ ಇದ್ದ ಭಾಷೆಗಳ ಪರಿಚಯ ಮತ್ತು ಅವರ ಅನುಭವವು ಲಾವಣಿ ಹಾಗೂ ಲಾವಣಿಕಾರರನ್ನು ಇಷ್ಟು ಶಕ್ತಿಶಾಲಿಯಾಗಿ ಗ್ರಹಿಸಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕಥೆಗಾರ್ತಿಯರ ಸಾಲಿನಲ್ಲಿ ವಿಭಿನ್ನ ವಾಗಿ ನಿಲ್ಲುವ ಹೆಸರು ಕೊಡಗಿನ ಗೌರಮ್ಮ ಅವರದು’ ಎಂದರು  ಶಿವ ಮೊಗ್ಗ ಸಹ್ಯಾದ್ರಿ ಕಾಲೇಜಿನ ಅಧ್ಯಾಪಕ ಎಸ್‌. ಸಿರಾಜ್‌ ಅಹಮದ್‌. ಕೊಡಗಿನ ಗೌರಮ್ಮ ಅವರ ‘ವಾಣಿಯ ಸಮಸ್ಯೆ’ ಬರಹ ಕುರಿತು ಮಾತನಾಡಿ, ಮೊದಲ ತಲೆ ಮಾರಿನ ಕಥೆಗಾರ್ತಿಯರಾದ ತಿರುಮ ಲಾಂಬ, ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ ಅವರು, ‘ವಿಧವಾ ವಿವಾಹ, ಸ್ತ್ರೀ ಸ್ವಾತಂತ್ರ್ಯ, ಶೋಷಣೆ ಮೊದಲಾದ ಸಾಮಾಜಿಕ ಸಮಸ್ಯೆ ಚಿತ್ರಣಗಳ ಮೂಲಕ ಹೆಣ್ಣಿನ ಅಸ್ತಿತ್ವವನ್ನು ಶೋಧಿಸುವ ಪ್ರಯತ್ನ ಮಾಡಿದರು ಎಂದರು.

ಆಲೋಚನ ಕ್ರಮದ ಬೆಳವಣಿಗೆ
‘ನಮ್ಮ ಸಾಮಾಜಿಕ ಪರಿಸ್ಥಿತಿ, ರಾಜಕೀಯ ಪರಿಸ್ಥಿತಿಯನ್ನು ಹೇಗೆ ಗ್ರಗಹಿಸಿಕೊಳ್ಳಬೇಕು ಎಂಬ ಆಲೋಚನಾ ಕ್ರಮವನ್ನು ನೀಡು ವುದು ಸಾಹಿತ್ಯ ಕೃತಿಗಳು. ನಮ್ಮ ಸಾಮಾಜಿಕ, ರಾಜಕೀಯ ಸಂದ ರ್ಭಕ್ಕೆ ರಚನಾತ್ಮಕ ಚಲನಶೀಲತೆ ಇದ್ದರೆ, ಅದು ಅತ್ಯುತ್ತಮ ಸಾಹಿತ್ಯ ಕೃತಿಗಳಿಂದ ಸೃಜನಶೀಲ ಗೊಂಡಿದ್ದಾಗಿರುತ್ತದೆ’ ಎಂದು ಗೋಷ್ಠಿಯ ನಿರ್ದೇಶಕ ಶೂದ್ರ ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.