ADVERTISEMENT

12ರಂದು ದೆಹಲಿಯಲ್ಲಿ ಸಾಹಿತ್ಯ ಸಂಗಮ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2015, 19:30 IST
Last Updated 7 ಡಿಸೆಂಬರ್ 2015, 19:30 IST

ಮಡಿಕೇರಿ: ಡಿ. 12ರಂದು ನವದೆಹಲಿಯಲ್ಲಿ ಸಾಹಿತ್ಯ ಸಂಗಮವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೋಲ್ಯದ ಗಿರೀಶ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಐದು ಅಕಾಡೆಮಿಗಳ ಪೈಕಿ ನಮ್ಮ ಅಕಾಡೆಮಿ ಮೊದಲ ಬಾರಿಗೆ ದೆಹಲಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ‘ದೆಹಲಿ ಕರ್ನಾಟಕ ಸಂಘ’ದ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾನು ವಹಿಸಲಿದ್ದು, ಅತಿಥಿಗಳಾಗಿ ಸಚಿವೆ ಉಮಾಶ್ರೀ ಆಗಮಿಸುವರು ಎಂದು ಹೇಳಿದರು.

ಅತಿಥಿಗಳಾಗಿ ಕೊಡಗು–ಮೈಸೂರು ಸಂಸದ ಪ್ರತಾಪ ಸಿಂಹ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮೈಸೂರು ಶಾಸಕ ವಾಸು, ನವದೆಹಲಿಯ ಕನ್ನಡ ಅಧ್ಯಯನ ಪೀಠದ ಪ್ರೊ.ಪುರುಷೋತ್ತಮ ಬಿಳಿಮಲೆ, ನವದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ನಾಣಯ್ಯ, ನವದೆಹಲಿ ಇಂಡಿಯಾ ಟುಡೇ ಪತ್ರಿಕೆಯ ಸಂಪಾದಕ ಬಡ್ಡನ ರಾಜ್‌ ಚಂಗಪ್ಪ, ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಆಗಮಿಸುವರು ಎಂದು ವಿವರ ನೀಡಿದರು.

ಅಕಾಡೆಮಿ ಸದಸ್ಯ ಡಾ.ಪೂವಪ್ಪ ಕಣಿಯೂರು ಆಶಯ ನುಡಿಯನ್ನಾಡಲಿದ್ದಾರೆ. ಕೊಡಗಿನಿಂದ ಸುಮಾರು 10 ತಂಡಗಳು ಹಾಗೂ ದೆಹಲಿಯಲ್ಲಿರುವ ಅರೆಭಾಷಿಗರ ತಂಡದಿಂದ ‘ಸಾಂಸ್ಕೃತಿಕ ವೈಭವ’ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.