ಬೆಂಗಳೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ 3,107 ದೌರ್ಜನ್ಯ ಪ್ರಕರಣ ದಾಖಲಾಗಿವೆ ಎಂದು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀಬಾಯಿ ತಿಳಿಸಿದರು.
ಆಯೋಗದ 2018ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳಿಗೆ ಸರಾಸರಿ 230 ಪ್ರಕರಣ ದಾಖಲಾಗಿವೆ ಎಂದರು.
ಪ್ರತಿ ಜಿಲ್ಲೆಯಲ್ಲೂ ದೌರ್ಜನ್ಯ ಪ್ರಕರಣಗಳ ಸ್ವರೂಪ ಭಿನ್ನವಾಗಿವೆ. ರಾಮನಗರದಲ್ಲಿ ಬಹುಪತ್ನಿತ್ವ, ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಪ್ರಕರಣಗಳು, ಚಿಕ್ಕಮಗಳೂರಿನಲ್ಲಿ ವಲಸಿಗರ ಮೇಲೆ ಅತ್ಯಾಚಾರ, ಮೈಸೂರಿನಲ್ಲಿ ಪ್ರೇಮ ವಿವಾಹದ ನಂತರ ದೌರ್ಜನ್ಯ, ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲ, ಕೊಪ್ಪಳದಲ್ಲಿ ಬಾಲ್ಯವಿವಾಹ... ಹೀಗೆ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ದುಡಿಯುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿರುವ 72 ಪ್ರಕರಣ ದಾಖಲಾಗಿವೆ ಎಂದರು.
ಮೆಟ್ರೊ ರೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಅಳವಡಿಸಲು ಈಗಾಗಲೇ ಪತ್ರ ಬರೆದಿದ್ದೇನೆ. ಅಧಿಕಾರಿಗಳು ಕ್ರಮದ ಭರವಸೆ ನೀಡಿದ್ದಾರೆ ಎಂದೂ ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.