ADVERTISEMENT

ಜನಮೆಚ್ಚಿದ ಬಿಜೆಪಿಗೆ ‘ಉಗ್ರಗಾಮಿ’ ಟೀಕೆ ಶೋಭೆತರಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 11:41 IST
Last Updated 11 ಜನವರಿ 2018, 11:41 IST
ಜನಮೆಚ್ಚಿದ ಬಿಜೆಪಿಗೆ ‘ಉಗ್ರಗಾಮಿ’ ಟೀಕೆ ಶೋಭೆತರಲ್ಲ: ಯಡಿಯೂರಪ್ಪ
ಜನಮೆಚ್ಚಿದ ಬಿಜೆಪಿಗೆ ‘ಉಗ್ರಗಾಮಿ’ ಟೀಕೆ ಶೋಭೆತರಲ್ಲ: ಯಡಿಯೂರಪ್ಪ   

ತುಮಕೂರು: ‘ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ನಾಲ್ಕು ತಿಂಗಳು ಕಳೆದರೆ ರಾಜ್ಯದಲ್ಲೂ ಅಧಿಕಾರ ನಡೆಸಲಿದೆ. ಇಂತಹ ಪಕ್ಷವನ್ನು ‘ಉಗ್ರಗಾಮಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವುದು ಶೋಭೆ ತರುವಂತಹದ್ದಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶಿರಾದಲ್ಲಿ ಗುರುವಾರ ನಡೆದ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿ, ‘ನರೇಂದ್ರ ಮೋದಿ ಪ್ರಧಾನಿಯಾದಾಗ ಕೇವಲ 6 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈಗ 19 ರಾಜ್ಯಗಳಲ್ಲಿದೆ. ದೇಶವ್ಯಾಪಿ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿದ್ದಾರೆ. ನೀವು(ಸಿದ್ದರಾಮಯ್ಯ) ಮಾತ್ರ ಬಿಜೆಪಿಯನ್ನು ಉಗ್ರಗಾಮಿ ಎಂದು ಟೀಕಿಸುತ್ತಿದ್ದೀರಿ’ ಎಂದರು.

‘ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸುಸೂತ್ರವಾಗಿ ಬಗೆಹರಿಸಿಕೊಂಡು ರಾಜ್ಯಕ್ಕೆ ನೀರು ತರುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿತು. ಆದರೆ, ಕಾಂಗ್ರೆಸ್ ಷಡ್ಯಂತ್ರ ನಡೆಸಿ ಸಮಸ್ಯೆ ಬಗೆಹರಿಯಲು ಬಿಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದ್ದರೆ ನನ್ನ ಹೆಸರಿನಲ್ಲಿಯೇ ರಾಮ ಇದ್ದಾನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದು ದುರ್ದೈವ. ಅವರ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು’ ಎಂದು ಯಡಿಯೂರಪ್ಪ ಟೀಕಿಸಿದರು.

’ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗುವುದು. ರಾಜ್ಯದಲ್ಲಿ 28 ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿರುವ ಈ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯ ಉನ್ನತಿಗೆ ಶ್ರಮಿಸಲಿದೆ’ ಎಂದು ಹೇಳಿದರು.

'ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಕಚೇರಿಗೂ ಹೋದರೂ ಲಂಚಾವತಾರ. ಬೆಂಗಳೂರಿನಲ್ಲಿ ಕಾರ್ನರ್ ಸೈಟ್‌ಗಳನ್ನೇ ಮಾರಾಟ ಮಾಡಿ ₹ 950 ಕೋಟಿ ಲೂಟಿ ಹೊಡೆಯಲಾಗಿದೆ. ನೀರಾವರಿ ಯೋಜನೆಗಳ ಬಗ್ಗೆ ಸಾರ್ವಜನಿಕರು ಮತ್ತು ರೈತರ ಮೂಗಿಗೆ ತುಪ್ಪ ಸವರಿಕೊಂಡು ಈ ಸರ್ಕಾರ ಕಾಲ ಹರಣ ಮಾಡಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.