ಮೈಸೂರು: ತಾಯಿ ಸಾವಿನ ಸುದ್ದಿ ಕೇಳಿ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ವಾಜಮಂಗಲದಲ್ಲಿ ನಡೆದಿದೆ.
ಸತೀಶ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ.
ಸೋಮವಾರ ತಡರಾತ್ರಿ ಸತೀಶ್ ಅವರ ತಾಯಿ ರತ್ನಮ್ಮ (45) ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಸುದ್ದಿ ಕೇಳುತ್ತಿದ್ದಂತೆ ಬೇಸರಗೊಂಡ ಸತೀಶ್ ಸುಮಾರು ಎರಡೂವರೆ ಗಂಟೆಗಳ ಕಾಲದ ವಿಡಿಯೊ ಮಾಡಿ ಅದರಲ್ಲಿ ತನ್ನ ಸಾವಿಗೆ ಕಾರಣ ತಿಳಿಸಿ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಸತೀಶ್ ತಂದೆ ಸಹ ಮೃತಪಟ್ಟಿದ್ದರು.
ವಿಡಿಯೊದಲ್ಲಿ ಏನಿದೆ?
‘ಎಲ್ಲಾ ನನ್ನ ಸ್ನೇಹಿತರಿಗೆ ಕಡೆಯ ನಮಸ್ಕಾರಗಳು..... ನನ್ನ ತಾಯಿ ತೀರಿಕೊಂಡಿದ್ದಾರೆ ಅದಕ್ಕೋಸ್ಕರ ನಾನು ತಾಯಿ ಜೊತೆ ಹೋಗಬೇಕು ಎಂದು ತೀರ್ಮಾನಿಸಿದ್ದೇನೆ. ಏನಕ್ಕೆ ನಾನು ಈ ವಿಡಿಯೋ ಮಾಡ್ತೀದ್ದೀನಿ ಅಂದ್ರೆ ನನ್ನ ಸ್ನೇಹಿತರು ನನ್ನ ಮೇಲೆ ಇಟ್ಟಿರೋ ಪ್ರೀತಿಯಿಂದ ..ನಿಮ್ಮೆಲ್ಲರಿಗೂ ನಾನು ಮೋಸ ಮಾಡಿ ಹೋಗುತ್ತಿದ್ದೇನೆ. ನಾನು ನನ್ನ ತಾಯಿ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ನನ್ನ ಪ್ರೀತಿಸೊ ಎಲ್ಲರಿಗೂ ಕಡೆಯ ನಮಸ್ಕಾರಗಳು.
ನನ್ನ ಪ್ರೀತಿಯ ಕುಮಾರಣ್ಣನಿಗೆ ನಿಮ್ಮ ಸತೀಶನ ಕಡೆಯ ನಮಸ್ಕಾರ. ವಿನು, ಜೀತು, ಗಿರೀಶ್, ವಿನೋದ್ ಆಲನಹಳ್ಳಿ ಯೋಗೇಶ್ಗೆ ಇನ್ನಿತರ ಎಲ್ಲಾ ಸ್ನೇಹಿತರಿಗೆ ನಿಮ್ಮ ಸ್ನೇಹಿತನ ಕಡೆಯ ನಮಸ್ಕಾರ. ನಮ್ಮ ತಾಯಿ ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತಿದ್ದೆ. ಏನಕ್ಕೆ ಈ ವಿಡಿಯೋ ಮಾಡ್ತಿದ್ದೀನಿ ಅಂದ್ರೆ ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ.
ಅದು ಏನು ಅಂತಾ ಬಾಯಿ ಬಿಟ್ಟು ಹೇಳೋಕೆ ಆಗುತ್ತಿಲ್ಲ ಕ್ಷಮಿಸಿ. ಎಲ್ಲಾ ನನ್ನ ವಾಜಮಂಗಲದ ಜನತೆಗೆ ನನ್ನ ಕಡೆ ಸಮಸ್ಕಾರ’ ಎಂಬ ಮಾತುಗಳು ವಿಡಿಯೊದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.