ಹೊಸಪೇಟೆ: ತಾಲ್ಲೂಕಿನ ಕಾಕುಬಾಳು ಕ್ರಾಸ್ ಸಮೀಪ ಗುರುವಾರ ರಾತ್ರಿ ಲಾರಿ ಮತ್ತು ಆಟೊ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಏಳು ಜನ ಗಾಯಗೊಂಡಿದ್ದಾರೆ.
ಬಿಹಾರದ ರವೀಂದ್ರ ಸಿಂಗ್ (40), ದೀಪಕ್ (35) ಹಾಗೂ ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಸುರೇಶ್ (30) ಮೃತರು. ಹೊಸಪೇಟೆ- ಬಳ್ಳಾರಿ ನಡುವೆ ಚತುಷ್ಪಥ ನಿರ್ಮಾಣ ಕೆಲಸ ನಡೆದಿದ್ದು, ಕೆಲಸ ಮುಗಿಸಿಕೊಂಡು ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಕಾರ್ಮಿಕರೆಲ್ಲರೂ ಗ್ಯಾಮನ್ ಇಂಡಿಯಾ ಕಂಪನಿಯಲ್ಲಿ ರಸ್ತೆ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಲಾರಿ ಹೊಸಪೇಟೆಯಿಂದ ತೋರಣಗಲ್ ಕಡೆಗೆ ಹೊರಟಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಆಟೊಗೆ ಲಾರಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಆಟೊ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತರ ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳೀಯರ ನೆರವಿನಿಂದ ಗಾದಿಗನೂರು ಪೊಲೀಸರು ಶವಗಳನ್ನು ಆಸ್ಪತ್ರೆಗೆ ಸಾಗಿಸಿದರು.
ಘಟನೆ ಜರುಗಿದ ಕೆಲಸಮಯದ ವರೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.