ADVERTISEMENT

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಎಸ್.ಎಂ.ಕೃಷ್ಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 7:08 IST
Last Updated 20 ಜನವರಿ 2018, 7:08 IST
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ   

ಮಂಡ್ಯ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ 'ಭಾರತ ರತ್ನ' ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

‘111 ವರ್ಷ ವಯೋಮಾನದ ಸ್ವಾಮೀಜಿ 8 ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಸಮಾನತೆ ತರಲು ಶ್ರಮಿಸುತ್ತಿರುವ ಅವರು ಸಮಾನತಾವಾದಿಯಾಗಿದ್ದಾರೆ. ಕನ್ನಡ, ಇಂಗ್ಲಿಷ್‌ ಮತ್ತು ಸಂಸ್ಕೃತ ಸಾಹಿತ್ಯ ಜ್ಞಾನ ಹೊಂದಿರುವ ಅವರು, ಸಮಾಜದಲ್ಲಿನ ಕೆಟ್ಟ ಆಚರಣೆ, ಮೂಢನಂಬಿಕೆ ಮತ್ತು ತಾರತಮ್ಯ ತೊಲಗಿಸಲು ಬೋಧನೆ ಮಾಡುತ್ತಿದ್ದಾರೆ. ವರ್ಗ ಮತ್ತು ಮತಭೇದವಿಲ್ಲದೆ ಎಲ್ಲರು ದರ್ಶನ ಪಡೆಯುವ ವಾತಾವರಣ ಸೃಷ್ಟಿಸಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಲಕ್ಷಾಂತರ ಭಕ್ತರು ಸ್ವಾಮೀಜಿ ಅವರನ್ನು ‘‘ನಡೆದಾಡುವ ದೇವರು’’ ಎಂದೇ ಆರಾಧಿಸುತ್ತಾರೆ. ಅವರು ಭಾರತ ರತ್ನಕ್ಕೆ ಭಾಜನರಾಗುವುದನ್ನು ಜನ ಎದುರು ನೋಡುತ್ತಿದ್ದಾರೆ. ಕಾಯಕಯೋಗಿ ಆಗಿರುವ ಅವರನ್ನು ಕೇಂದ್ರ ಸರ್ಕಾರ ಪುರಸ್ಕಾರ ನೀಡಿ ಗೌರವಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಸ್ವಾಮೀಜಿ ಮನುಕುಲಕ್ಕೆ ನೀಡಿದ ಸೇವೆಗೆ ಪ್ರತಿಯಾಗಿ ಮತ್ತು ಲಕ್ಷಾಂತರ ಭಕ್ತರ ನಿರೀಕ್ಷೆಯಂತೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘‘ಭಾರತ ರತ್ನ’’ವನ್ನು ಪ್ರದಾನಿಸಬೇಕು. ಆ ಪುರಸ್ಕಾರಕ್ಕೆ ಅವರು ಅರ್ಹರಾಗಿದ್ದಾರೆ’ ಎಂದು ಕೃಷ್ಣ ಅವರು ಪತ್ರದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.