ADVERTISEMENT

ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ

ಬಡ್ತಿ ಮೀಸಲು: ಸುಪ್ರೀಂ ಆದೇಶ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ
ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಎಂಜಿನಿಯರ್‌ಗಳ ನಿರ್ಧಾರ   

ಬೆಂಗಳೂರು: ರಾಜ್ಯ ಸರ್ಕಾರದ ಬಡ್ತಿ ಮೀಸಲು ಕಾಯ್ದೆ– 2002 ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೂ ಉಲ್ಲಂಘಿಸಿ ಲೋಕೋಪಯೋಗಿ ಇಲಾಖೆಯಲ್ಲಿ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಲಾಗಿದೆ ಎಂದು ಇಲಾಖೆಯ ಎಂಜಿನಿಯರುಗಳು ದೂರಿದ್ದಾರೆ.

ಈ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಇದೇ 29ರಂದು ವಿಚಾರಣೆಗೆ ಬರಲಿದೆ. ಅದೇ ದಿನ ಈ ವಿಷಯವನ್ನೂ ನ್ಯಾಯಪೀಠದ ಗಮನಕ್ಕೆ ತರಲು ನಿರ್ಧರಿಸಲಾಗಿದೆ.

ADVERTISEMENT

ಲೋಕೋಪಯೋಗಿ ಮತ್ತು ವಿವಿಧ ಇಲಾಖೆಗಳಲ್ಲಿ ಸುಮಾರು 7,400 ಎಂಜಿನಿಯರ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋರ್ಟ್ ಆದೇಶದ ಪ್ರಕಾರ 1978ರಿಂದ 2017ರವರೆಗೆ ಅನ್ವಯವಾಗುವಂತೆ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಬೇಕಿತ್ತು.

ಆದರೆ, ಇಲಾಖೆ 2004ರವರೆಗೆ ಮಾತ್ರ ಅನ್ವಯವಾಗುವಂತೆ ಪಟ್ಟಿ ಸಿದ್ಧಪಡಿಸಿ 2017ರ ನ. 29ರಂದು ಪ್ರಕಟಿಸಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತವಾದಾಗ 2009ರವರೆಗೆ ಅನ್ವಯವಾಗುವಂತೆ ಪಟ್ಟಿಯನ್ನು ಪರಿಷ್ಕರಿಸಿ 2018ರ ಜನವರಿ 10ರಂದು ಪ್ರಕಟಿಸಲಾಗಿದೆ.

‘ಇಲಾಖೆಯ ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ 2017ಕ್ಕೆ ಅನ್ವಯವಾಗುವಂತೆ ಜ್ಯೇಷ್ಠತಾ ಪಟ್ಟಿ ಸಿದ್ಧತೆಪಡಿಸುತ್ತಿಲ್ಲ. ಆ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಜೊತೆಗೆ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಎಂಜಿನಿಯರ್‌ಗಳಿಗೆ ಅನ್ಯಾಯ ಎಸಗುತ್ತಿದ್ದಾರೆ’ ಎಂದು ಎಂಜಿನಿಯರ್‌ಗಳು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.