ಮಂಗಳೂರು: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಹಾಗೂ ಕೊಟ್ಟಾರ ಚೌಕಿಯಲ್ಲಿ ಅಬ್ದುಲ್ ಬಶೀರ್ ಅವರ ಮೇಲೆ ನಡೆದ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಮತ್ತೆ ಹತ್ತು ಜನರನ್ನು ಬಂಧಿಸಲಾಗಿದೆ. ದೀಪಕ್ ರಾವ್ ಕೊಲೆಗೆ ಸಂಬಂಧಿಸಿದಂತೆ ಆರು ಜನ ಹಾಗೂ ಬಶೀರ್ ಕೊಲೆಗೆ ಸಂಬಂಧಿಸಿದಂತೆ ಒಳಸಂಚು ರೂಪಿಸಿದ ನಾಲ್ವರನ್ನು ಬಂಧಿಸಲಾಗಿದೆ.
ದೀಪಕ್ ರಾವ್ ಕೊಲೆಗೆ ಸಂಬಂಧಿಸಿದಂತೆ ಒಳಸಂಚು ರೂಪಿಸಿದ ಹಾಗೂ ಆರೋಪಿಗಳಿಗೆ ಸಹಾಯ ಮಾಡಿದ ಮೊಹ್ಮದ್ ರಫೀಕ್, ಇರ್ಫಾನ್, ಮೊಹ್ಮದ್ ಅನಸ್, ಮುಹಮ್ಮದ್ ಜಾಹೀದ್, ಹಿತಾಯಿತುಲ್ಲ, ಇಮ್ರಾನ್ ನವಾಜ್ನನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ 6 ಜನರನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ 12ಕ್ಕೆ ಏರಿದೆ.
ಅಬ್ದುಲ್ ಬಶೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಇದ್ದುಕೊಂಡೆ ಸಂಚು ರೂಪಿಸಲಾಗಿತ್ತು. ಬೇರೆ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಿಥುನ್ ಕಲ್ಲಡ್ಕ, ತಿಲಕರಾಜ್ ಶೆಟ್ಟಿ, ರಾಜು ಅಲಿಯಾಸ್ ರಾಜೇಶ ಎಂಬವರು, ಜೈಲಿನಲ್ಲಿ ಇದ್ದುಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಕೊಟ್ಟಾರ ಚೌಕಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಹತ್ಯೆಗೆ ನಿರ್ಧರಿಸಿದ್ದರು. ಅದರಂತೆ ಬಶೀರ್ ಅವರ ಬಗ್ಗೆ ಮಾಹಿತಿ ಇದ್ದ ಅನೂಪ್ ಸಹಾಯ ಪಡೆದು, ಈ ಕೃತ್ಯ ಎಸಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಮೂವರು ಈಗಾಗಲೇ ಜೈಲಿನಲ್ಲಿದ್ದು, ಬಾಡಿ ವಾರಂಟ್ ಮೇಲೆ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದರು.
ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವವರು ಯಾವ ಸಂಘಟನೆಯಲ್ಲಿದ್ದಾರೆ ಎಂಬುದನ್ನು ಇನ್ನು ತನಿಖೆ ಮಾಡಲಾಗುತ್ತಿದೆ. ಆರೋಪಿ ಮಿಥುನ್ ಕಲ್ಲಡ್ಕ, ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಅವರ ಜತೆಗೆ ಗುರುತಿಸಿಕೊಂಡಿರುವುದು ಈ ಹಿಂದೆಯೆ ಸ್ಪಷ್ಟವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.