ADVERTISEMENT

ಗೌರಿ ಹತ್ಯೆ ಪ್ರಕರಣ: ನ್ಯಾಯಯುತ ತನಿಖೆಗೆ ಆರೋಪಿಯ ಕುಟುಂಬ ಮನವಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 12:51 IST
Last Updated 23 ಆಗಸ್ಟ್ 2018, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಅಮಾಯಕರಿಗೆ ತೊಂದರೆಯಾಗದಂತೆ ತನಿಖೆಯನ್ನು ನಿಖರ ಮತ್ತು ನ್ಯಾಯಯುತವಾಗಿ ಮಾಡುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಅಮಿತ್‌ ಬದ್ದಿ ಅವರ ಕುಟುಂಬ ರಾಜ್ಯಪಾಲರಿಗೆ ಮನವಿ ಮಾಡಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಿತ್‌ ಬದ್ದಿ ತಾಯಿ ಜಯಶ್ರೀ ಬದ್ದಿ, ಪತ್ನಿ ಅಂಜಲಿ ಬದ್ದಿ ಮತ್ತು ಸಹೋದರ ತುಷಾರ್‌ ಬದ್ದಿ, ‘ಅಮಿತ್‌ ಅಮಾಯಕನಾಗಿದ್ದಾನೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಆತನನ್ನು ಪೊಲೀಸರು ಬಂಧಿಸಿ, ಅಮಾನವೀಯವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಆದಷ್ಟು ಶೀಘ್ರ ಎಸ್‌ಐಟಿ ವಶದಿಂದ ಆತನನ್ನು ಬಿಡುಗಡೆಗೊಳಿಸಬೇಕು’ ಎಂದು ಕೋರಿದರು.

‘ಅಮಿತ್‌ ಬದ್ದಿ ಕುಟುಂಬದ ಆಧಾರಸ್ತಂಭವಾಗಿದ್ದ, ಆತನ ಬಂಧನದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಆರ್ಥಿಕವಾಗಿ ಕುಗ್ಗಿ ಹೋಗಿದ್ದೇವೆ, ಆತನ ಬಂಧನದಿಂದ ಸಮಾಜದಲ್ಲಿ ನಮಗೆ ತಲೆ ಎತ್ತಿ ಬದುಕಲೂ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ, ಮಾನಸಿಕವಾಗಿ ಆಘಾತ ಉಂಟಾಗಿದೆ’ ಎಂದು ಕುಟುಂಬದವರು ನೋವು ತೋಡಿಕೊಂಡರು.

ADVERTISEMENT

‘ಈ ಪ್ರಕರಣದಲ್ಲಿ ಅಮಿತ್‌ ಬದ್ದಿ ಅಮಾಯಕನಾಗಿದ್ದು, ಆತನನ್ನು ಬಿಡುಗಡೆ ಮಾಡಿಸಲು ಸಹಕಾರ ನೀಡುವಂತೆ ಕೋರಿ ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌ ಮತ್ತು ಸಹೋದರ ಇಂದ್ರಜಿತ್‌ ಲಂಕೇಶ್‌ ಅವರಿಗೂ ಮನವಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಅಮಿತ್‌ ಬದ್ದಿ ಬಿಡುಗಡೆಗೆ ಕೋರಿ ಕುಟುಂಬದವರು ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.