ಸಕಲೇಶಪುರ: ಸಕಲೇಶಪುರ– ಸುಬ್ರಹ್ಮಣ್ಯ ರೈಲುಮಾರ್ಗದ ಹಳಿಯ ಮೇಲೆ ಮಂಗಳವಾರ ಮಧ್ಯಾಹ್ನ ಬಂಡೆಯೊಂದು ಉರುಳಿ ಬಿದ್ದಿದೆ.
ಕಡಗರವಳ್ಳಿ– ಯಡಕುಮೇರಿ ನಡುವಿನ ಕಿ.ಮೀ 86ರಲ್ಲಿ ಸಾಧಾರಣ ಗಾತ್ರದ ಬಂಡೆ ಉರುಳಿದ್ದು, ರೈಲ್ವೆ ಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಗಳೂರು– ಕಾರವಾರ ರೈಲು ಸ್ಥಳೀಯ ನಿಲ್ದಾಣದಿಂದ ಮಧ್ಯಾಹ್ನ 11.40ಕ್ಕೆ ನಿರ್ಗಮಿಸಿದ್ದು, ಯಡಕುಮೇರಿ ನಿಲ್ದಾಣ ದಾಟಿದ ಸ್ವಲ್ಪ ಸಮಯದಲ್ಲೇ ಬಂಡೆ ಉರುಳಿ ಬಿದ್ದಿದೆ. ಇದರಿಂದ ಮಧ್ಯಾಹ್ನ 3.30ಕ್ಕೆ ಸಕಲೇಶಪುರಕ್ಕೆ ಬರಬೇಕಿದ್ದ ಕಾರವಾರ– ಬೆಂಗಳೂರು ರೈಲು ಸಂಚಾರ ವ್ಯತ್ಯಯಗೊಂಡಿದ್ದು, ಕೇರಳದ ಪಾಲಘಾಟ್ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಿತು.
‘ತೆರವು ಕಾರ್ಯ ಮುಗಿಯಲಿದೆ. ಬೆಂಗಳೂರಿನಿಂದ ಕಾರವಾರಕ್ಕೆ ರಾತ್ರಿ 2.30ಕ್ಕೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ 12.30ಕ್ಕೆ ತೆರಳುವ ರೈಲಿನ ಸಂಚಾರಕ್ಕೆ ಯಾವುದೇ ತೊಡಕು ಆಗುವುದಿಲ್ಲ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.