ADVERTISEMENT

ಉದ್ಯೋಗ ಅರಸಿ ಹೋದ ತಮಿಳಿಗ ಈಗ ಗವರ್ನರ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

ಪೋರ್ಟ್‌ ಮೊರ್ಸೆಬಿ (ಪಿಟಿಐ): ಹೊಟ್ಟೆಪಾಡಿಗಾಗಿ ಪಪುವಾ ನ್ಯೂಗಿನಿಗೆ (ಪಿಎನ್‌ಜಿ) ತೆರಳಿದ್ದ ತಮಿಳುನಾಡಿನ ಶಿವಕಾಶಿ ಮೂಲದ ಶಶೀಂದ್ರನ್‌ ಮುತ್ತುವೇಲ್‌ (41), ಈಗ ಅಲ್ಲಿನ ವೆಸ್ಟ್‌ ನ್ಯೂ ಬ್ರಿಟನ್‌ ಪ್ರಾಂತ್ಯದ ಗವರ್ನರ್‌.

ಸುಮಾರು 20 ವರ್ಷಗಳ ಹಿಂದೆ  ಜೀವನೋಪಾಯಕ್ಕಾಗಿ ಕೆಲಸ ಅರಸುತ್ತಿದ್ದಾಗ ಉದ್ಯೋಗದ ಜಾಹೀರಾತು ನೋಡಿ ಇಲ್ಲಿಗೆ ಬಂದಿದ್ದ ಶಶೀಂದ್ರನ್‌ ಈಗ ದೇಶದ ಒಂದು ಪ್ರಾಂತ್ಯದ ಆಡಳಿತದ ಹೊಣೆಯನ್ನೇ ಹೊತ್ತುಕೊಂಡಿದ್ದಾರೆ.

ಶಶೀಂದ್ರನ್‌, ಚಿಲ್ಲರೆ ಮಾರಾಟ ಅಂಗಡಿಯ ವ್ಯವಸ್ಥಾಪಕನ ಕೆಲಸಕ್ಕಾಗಿ ಪಿಎನ್‌ಜಿಗೆ ಬಂದಿದ್ದರು. ಕೌಶಲ ಹೊಂದಿರುವ ವಲಸಿಗನಾಗಿ ಇಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಬಹುದು ಎನ್ನುವುದು ಅವರ ಗುರಿಯಾಗಿತ್ತು. ಆದರೆ, ಅಂಗಡಿ ಮುಚ್ಚಿಹೋಗಿದ್ದು ಅವರ ಬದುಕಿನ ದೆಸೆ ಬದಲಿಸಿತು.

ತಮ್ಮದೇ ಚಿಕ್ಕ ಚಿಲ್ಲರೆ ವ್ಯವಹಾರವೊಂದನ್ನು ಪ್ರಾರಂಭಿಸಿದ ಶಶೀಂದ್ರನ್‌, ಅದರ ಅನೇಕ ಶಾಖೆಗಳನ್ನು ಬೆಳೆಸಿದ್ದರು. ಈ ಮಧ್ಯೆ ಊರಿಗೆ ಬಂದು ಮದುವೆಯಾಗಿ ಮತ್ತೆ ಪಿಎನ್‌ಜಿಗೆ ತೆರಳಿದರು. ವ್ಯವಹಾರದಲ್ಲಿ ಬೆಳೆದು ಕ್ರಮೇಣ ಜನಪ್ರಿಯತೆ ಪಡೆದ ಅವರು 2007ರಲ್ಲಿ ದೇಶದ ಪೌರತ್ವ ಪಡೆದುಕೊಂಡರು. ತಮ್ಮದೇ ಪಕ್ಷ ಸ್ಥಾಪಿಸಿ, ಚುನಾವಣಾ ಕಣಕ್ಕಿಳಿದು 2009ರಲ್ಲಿ ವೆಸ್ಟ್‌ ನ್ಯೂ ಬ್ರಿಟನ್‌ನ ಗವರ್ನರ್‌ ಆಗಿ ಆಯ್ಕೆಯಾದರು.

‘ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪೂರೈಸಿದ ಬಳಿಕ ನಾನು 1995ರಲ್ಲಿ ಮಲೇಷ್ಯಾಕ್ಕೆ ಬಂದಿದ್ದೆ. 1997ರಲ್ಲಿ ಪಿಎನ್‌ಜಿಯಲ್ಲಿ ಕೆಲಸ ಖಾಲಿ ಇರುವುದರ ಕುರಿತ ಪತ್ರಿಕಾ ಜಾಹೀರಾತು ನೋಡಿದ್ದೆ. ಅದು ನನ್ನ ಜೀವನವನ್ನೇ ಬದಲಿಸಿತು’ ಎಂದು ಶಶೀಂದ್ರನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.