ADVERTISEMENT

ದಾಳಿ: ಭಾರತದ ಆರೋಪ ತಳ್ಳಿ ಹಾಕಿದ ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಇಸ್ಲ್ಲಾಮಾಬಾದ್‌(ಪಿಟಿಐ): ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆದ ದಾಳಿಯಲ್ಲಿ ಭಯೋತ್ಪಾದಕರ ಕೈವಾಡವಿದೆ ಎಂದು ಭಾರತ ಆರೋಪಿಸಿರುವುದು ಸರಿಯಲ್ಲ ಎಂದು ಪಾಕಿಸ್ತಾನ ಹೇಳಿದೆ.

ಪ್ರಕರಣದ ಬಗ್ಗೆ ತನಿಖೆಯಾಗುವ ಮೊದಲೇ ಈ ರೀತಿ ದೂರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಕ್ವಾಜಿ ಖಲೀಲುಲ್ಲಾ ಹೇಳಿದ್ದಾರೆ.‘ಗುರುದಾಸ್‌ಪುರದ ದಾಳಿಯನ್ನು ನಾವು  ಪ್ರಬಲವಾಗಿ ಖಂಡಿಸುತ್ತೇವೆ. ತನಿಖೆ ನಡೆದು ಸತ್ಯಾಂಶ ಹೊರ ಬರುವ ಮೊದಲೇ ಪಾಕಿಸ್ತಾನದತ್ತ ಬೆರಳು ಮಾಡುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆ ಪಾಕಿಸ್ತಾನವನ್ನು ಬಲಿಪಶುಮಾಡಿದೆ. ಆದರೂ ಭಾರತದ ಮಾಧ್ಯಮಗಳು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ 27 ರಂದು ಗುರುದಾಸಪುರದಲ್ಲಿ ದಾಳಿ ನಡೆಸಿದ ಉಗ್ರರು ರಾವಿ ನದಿಯ ಮೂಲಕ ಪಾಕಿಸ್ತಾನದಿಂದ ಬಂದಿದ್ದರು ಎಂದು ಜಿಪಿಎಸ್‌ನಿಂದ ದೊರೆತ ಮಾಹಿತಿ ಆಧರಿಸಿ ರಾಜ್ಯಸಭೆಯಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ ನೀಡಿದ್ದರು. ಇದರ  ಬೆನ್ನಲೇ  ಪ್ರತಿಕ್ರಿಯೆ ನೀಡಿರುವ ಖಲೀಲುಲ್ಲಾ ಅವರು ಸಿಂಗ್ ಹೇಳಿಕೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.