ಢಾಕಾ: ಎರಡೂ ದೇಶಗಳಿಗೆ ಸಮಾನ ಸವಾಲಾಗಿರುವ ಭಯೋತ್ಪಾದನೆ ಮತ್ತು ಅದರ ನಿರ್ಮೂಲನೆಗೆ ಒಟ್ಟಾಗಿ ಹೋರಾಡುವ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶಗಳು ಇಲ್ಲಿ ಭಾನುವಾರ ನಡೆದ ನಾಲ್ಕನೇ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ದೃಢಸಂಕಲ್ಪ ಮಾಡಿವೆ.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಮಾತುಕತೆ ನಡೆಸಿದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು, ದ್ವೇಷ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಅಳವಡಿಸಿಕೊಂಡಿರುವ ಶಕ್ತಿಗಳ ಬೆದರಿಕೆಗೆ ಜಗ್ಗದೆ ಸಮಾಜವನ್ನು ರಕ್ಷಿಸುವ ದೃಢ ಸಂಕಲ್ಪವನ್ನು ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.
‘ಭಾರತವು ಬಾಂಗ್ಲಾದೇಶದ ದೀರ್ಘಕಾಲದ ಮತ್ತು ಅಭಿವೃದ್ಧಿಯ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಸಣ್ಣ ಪ್ರಮಾಣದ ಸಾಮಾಜಿಕ–ಆರ್ಥಿಕ ಯೋಜನೆಗಳಿಗೂ ಭಾರತ ನೆರವನ್ನು ವಿಸ್ತರಿಸಲಿದೆ. ಹಿಂದೆ ಇಂತಹ 24 ಯೋಜನೆಗಳಿಗೆ ಭಾರತ ನೆರವು ನೀಡಿದೆ. 58 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆಗಳು ಬಾಂಗ್ಲಾದೇಶದ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ಸವಾಲು ಹಾಕುವ ಭಾರತದ ಪ್ರಯತ್ನದಂತೆ ಕಾಣುತ್ತಿದೆ. ಬಾಂಗ್ಲಾದ ಮೂಲಸೌಕರ್ಯ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಚೀನಾ ಪ್ರಯತ್ನಿಸುತ್ತಿದೆ.
******
ದೇಶದಲ್ಲಿ ಇಂಧನ ಕೊರತೆ ನೀಗಿಸಲು ಪೆಟ್ರೋಲಿಯಂ ಉತ್ಪನ್ನಗಳ ದೀರ್ಘಕಾಲದ ಮಾರಾಟ ಮತ್ತು ಖರೀದಿ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೋರೇಶನ್ (ಬಿಪಿಸಿ) ಮತ್ತು ನುಮಾಲಿಘಡ್ ರಿಫೈನರಿ ಲಿಮಿಟೆಡ್ ಕಂಪೆನಿಗಳ ಅಧಿಕಾರಿಗಳು ಸಚಿವೆ ಸುಷ್ಮಾ ಸ್ವರಾಜ್ ಸಮ್ಮುಖದಲ್ಲಿ ಸಹಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.