ಮ್ಯಾನ್ಮಾರ್: ಹಿಂಸಾಚಾರದ ಕಾರಣದಿಂದ ಚದುರಿರುವ ಸಮುದಾಯಗಳ ಕುರಿತು ಮರುಕ ವ್ಯಕ್ತಪಡಿಸಿದ ಸೂಕಿ, ಪರಿಶೀಲನಾ ಪ್ರಕ್ರಿಯೆ ನಡೆಸಿ ನಿರಾಶ್ರಿತರನ್ನು ದೇಶದೊಳಗೆ ಕರೆಸಿಕೊಳ್ಳಲು ಸದಾ ಸಿದ್ಧರಿದ್ದೇವೆ ಎಂದು ಆಂಗ್ ಸಾನ್ ಸೂಕಿ ಹೇಳಿದ್ದಾರೆ.
ಮಂಗಳವಾರ ಟಿವಿ ನೇರ ಪ್ರಸಾರದಲ್ಲಿ ಸೂಕಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ರೋಹಿಂಗ್ಯಾ ಮುಸ್ಲಿಂರ ಮೇಲೆ ನಡೆದಿರುವ ಹಿಂಚಾರಾದ ಕುರಿತು ಮೌನ ವಹಿಸಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಮ್ಯಾನ್ಮಾರ್ನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗಿತ್ತು.
ಧಾರ್ಮಿಕ ನಂಬಿಕೆಗಳು ಅಥವಾ ಜನಾಂಗೀಯತೆಯಿಂದ ಇಬ್ಬಾಗವಾದ ರಾಷ್ಟ್ರವಾಗಿ ಮ್ಯಾನ್ಮಾರ್ ಗುರುತಿಸಿಕೊಳ್ಳುವುದು ನಮಗೆ ಬೇಕಿಲ್ಲ ಎಂದು ಹೇಳಿದ್ದಾರೆ. ರಾಖೈನ್ನಲ್ಲಿ ನಡೆದ ಹಿಂಸಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದ್ದು, ರಾಖೈನ್ನ ಅವ್ಯವಸ್ಥೆಗೆ ಕಾರಣವಾದವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಬಾಂಗ್ಲಾದೇಶಕ್ಕೆ ವಲಸೆ ಹೋಗಿರುವ ಮುಸ್ಲಿಂರ ಕುರಿತು ಕಳವಳ ವ್ಯಕ್ತಪಡಿಸಿದ್ದು, ರೋಹಿಂಗ್ಯಾ ನಿರಾಶ್ರಿತರನ್ನು ಮತ್ತೆ ದೇಶದೊಳಗೆ ಕರೆಸಿಕೊಳ್ಳಲು ಶೀಘ್ರದಲ್ಲಿ ಪರಿಶೀಲನಾ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಮ್ಯಾನ್ಮಾರ್ ತೊರೆದು ವಲಸೆ ಹೋಗಿರುವ 4.10 ಲಕ್ಷ ರೋಹಿಂಗ್ಯಾ ಮುಸ್ಲಿಂರಲ್ಲಿ ಎಷ್ಟು ಜನರಿಗೆ ಮತ್ತೆ ದೇಶದೊಳಗೆ ಪ್ರವೇಶ ಸಿಗಬಹುದು ಎಂಬುದು ಸ್ಪಷ್ಟಗೊಂಡಿಲ್ಲ.
ಮ್ಯಾನ್ಮಾರ್ನ ಆಡಳಿತದಲ್ಲಿರುವವರ ಪ್ರಕಾರ, ಸೇನೆಯೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿರುವ 72 ವರ್ಷದ ಸೂಕಿ ಅವರಿಗೆ ಸೇನೆ ನಿಯಂತ್ರಿಸುವ ಪೂರ್ಣ ಅಧಿಕಾರ ಹೊಂದಿಲ್ಲ ಎನ್ನಲಾಗಿದೆ.
ಹಿಂಸಾಚಾರದ ಕಾರಣ ಕಳೆದ ಆಗಸ್ಟ್ 25ರಿಂದ ಸುಮಾರು 4.10ಲಕ್ಷ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರು ಮ್ಯಾನ್ಮಾರ್ನ ರಾಖೈನ್ ರಾಜ್ಯವನ್ನು ತೊರೆದು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದಾರೆ.
ಮ್ಯಾನ್ಮಾರ್ನಲ್ಲಿ ಸೇನೆಯ ಕಿರುಕುಳದ ಕಾರಣಕ್ಕೆ ರಾಖೈನ್ ರಾಜ್ಯದಿಂದ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶ ಮತ್ತು ಭಾರತಕ್ಕೆ ಪಲಾಯನ ಮಾಡಿದ್ದಾರೆ. ರೋಹಿಂಗ್ಯಾ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯು ಮ್ಯಾನ್ಮಾರ್ ಸರ್ಕಾರವನ್ನು ಟೀಕಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.