ಇಸ್ಲಾಮಾಬಾದ್ (ಪಿಟಿಐ/ ಐಎಎನ್ಎಸ್): ಲಷ್ಕರ್–ಎ–ತಯಬಾ (ಎಲ್ಇಟಿ) ಕಾರ್ಯಾಚರಣೆ ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿಯನ್ನು (54) ಇನ್ನೂ 3 ತಿಂಗಳು ಜೈಲಿನಲ್ಲಿ ಇಡುವಂತೆ ಪಾಕಿಸ್ತಾನ ಸರ್ಕಾರ ಶುಕ್ರವಾರ ಆದೇಶಿಸಿದೆ.
ಮುಂಬೈ ದಾಳಿಯ ಸಂಚುಕೋರ ಲಖ್ವಿಗೆ ಈ ದಾಳಿ ಪ್ರಕರಣದಲ್ಲಿ ಇಸ್ಲಾಮಾಬಾದ್ನ ಭಯೋತ್ಪಾದನಾ ಪ್ರಕರಣಗಳ ವಿಶೇಷ ನ್ಯಾಯಾಲಯ ಗುರುವಾರವಷ್ಟೇ ಜಾಮೀನು ಮಂಜೂರು ಮಾಡಿತ್ತು. ಇದು ಭಾರತದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆಯೇ ಪೊಲೀಸರು ಲಖ್ವಿ ವಿರುದ್ಧ ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ (ಎಂಪಿಒ) ಎಂಬ ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ರಾವಲ್ಪಿಂಡಿಯ ಅಡಿಯಲಾ ಜೈಲಿನಿಂದ ಲಖ್ವಿ ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗಬೇಕಿತ್ತು. ಆದರೆ ಆತನ ವಕೀಲರು ಜಾಮೀನು ಮಂಜೂರಿ ದಾಖಲಾತಿ ಪತ್ರವನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವುದಕ್ಕೂ ಮೊದಲೇ ಆತನ ಬಂಧನಕ್ಕೆ ಸರ್ಕಾರ ಹೊರಡಿಸಿರುವ ಆದೇಶವನ್ನು ಜೈಲು ಅಧೀಕ್ಷಕರಿಗೆ ತಲುಪಿಸಲಾಯಿತು’ ಎಂದು ಪ್ರಾಸಿಕ್ಯೂಷನ್ ಮುಖ್ಯಸ್ಥ ಚೌಧರಿ ಅಜರ್ ತಿಳಿಸಿದ್ದಾರೆ.
ತಾಲಿಬಾನ್ ಉಗ್ರರು ಪೆಶಾವರದ ಶಾಲೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ ಮರು ದಿವಸವೇ ಲಖ್ವಿಗೆ ಜಾಮೀನು ಸಿಕ್ಕಿದ್ದು, ಪ್ರಧಾನಿ ನವಾಜ್ ಷರೀಫ್ ಅವರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕ್ ನೀತಿಯನ್ನು ಭಾರತ ತೀವ್ರವಾಗಿ ಟೀಕಿಸಿತ್ತು.
ಲಖ್ವಿ ಬಿಡುಗಡೆಯಾದರೆ ಆಗುವ ಮತ್ತಷ್ಟು ಮುಖಭಂಗವನ್ನು ತಪ್ಪಿಸುವ ಸಲುವಾಗಿ ಷರೀಫ್ ಅವರು ಲಖ್ವಿಯನ್ನು ಪುನಃ ಬಂಧಿಸಲು ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಸೇನಾ ಶಾಲೆಯ ಮೇಲೆ ದಾಳಿ: ನಾಲ್ಕು ಮಂದಿ ವಶಕ್ಕೆ
ಪೆಶಾವರದ ಸೇನಾ ಶಾಲೆಯಲ್ಲಿ ನಡೆದ ಹತ್ಯಾಕಾಂಡದ ಸಂಬಂಧ ಮಹಿಳೆ ಸೇರಿದಂತೆ ಶಂಕಿತ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಸಂದರ್ಭದಲ್ಲಿ ಉಗ್ರರು ಬಳಸಿರುವ ಸಿಮ್ ಕಾರ್ಡ್ ಈ ಮಹಿಳೆ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.