ADVERTISEMENT

ವಿಶ್ವಸಂಸ್ಥೆಗೆ ನೇಪಾಳ ದೂರು; ಭಾರತ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಕಠ್ಮಂಡು (ಪಿಟಿಐ): ಭಾರತದ ಗಡಿಯಲ್ಲಿ ಇರುವ ತಪಾಸಣಾ ಚೌಕಿಯಲ್ಲಿ  ಸರಕು ಸಾಗಣೆ ಲಾರಿಗಳನ್ನು ಭಾರತದ ಭದ್ರತಾ ಪಡೆಗಳು ತಡೆ ಹಿಡಿಯುತ್ತಿರುವುದರಿಂದ ಅಗತ್ಯ ವಸ್ತುಗಳಾದ ಅಡುಗೆ ಅನಿಲ ಮತ್ತು ಪೆಟ್ರೋಲ್ ಕೊರತೆ ಉಂಟಾಗಿದೆ ಎಂದು ನೇಪಾಳ ಸರ್ಕಾರ ವಿಶ್ವಸಂಸ್ಥೆಗೆ ದೂರು ನೀಡಿದೆ.

ಭೂ ಪ್ರದೇಶದಿಂದ ಸುತ್ತುವರಿದಿರುವ ದೇಶಕ್ಕೆ ಯಾವುದೇ ರೀತಿಯ ಸರಕು ಸಾಗಣೆ ಮತ್ತು ಜನರ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂಬ ಅಂತರರಾಷ್ಟ್ರೀಯ ನಿಯಮ ಇದೆ.  ಆದರೂ, ಭಾರತವು ತಮ್ಮ ದೇಶಕ್ಕೆ ಬರುವ ಸರಕು ಸಾಗಣೆ ವಾಹನಗಳನ್ನು ಗಡಿಯಲ್ಲಿ ತಡೆಯುತ್ತಿದೆ ಎಂದು ನೇಪಾಳದ ಉಪ ಪ್ರಧಾನಿ ಪ್ರಕಾಶ್ ಮಾನ್‌ಸಿಂಗ್ ಅವರು  ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮೂನ್, ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಪಡಿಸಬಾರದು ಎಂದು ತಿಳಿಸಿದ್ದಾರೆ. ಹೊಸ ಸಂವಿಧಾನ ವಿರೋಧಿಸಿ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಸರಕು ಸಾಗಣೆ ವಾಹನಗಳು ದೇಶದ ಒಳಕ್ಕೆ ಬಾರದೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.

ಭಾರತ ನಿರಾಕರಣೆ: ನೇಪಾಳಕ್ಕೆ ಸಾಗುವ ಸರಕು ಸಾಗಣೆ ವಾಹನಗಳನ್ನು ಗಡಿಯಲ್ಲಿ ತಡೆ ಹಿಡಿಯಲಾಗಿದೆ ಎಂಬ ನೇಪಾಳದ ಅಪಾದನೆಯನ್ನು ಭಾರತ ತಳ್ಳಿ ಹಾಕಿದೆ. ಭಾರತದ ಗಡಿಯವರೆಗೂ ಸರಕು ಸಾಗಿಸಲು ಅವಕಾಶ ನೀಡಿದ್ದು, ನೇಪಾಳದ ಒಳಗೆ ಅಲ್ಲಿಯ ವಾಹನಗಳು ಸರಕನ್ನು ಸಾಗಿಸಬೇಕು. ಭಾರತ ಅಡ್ಡಿ ಪಡಿಸುತ್ತಿದೆ ಎಂಬುದು ಸಂಪೂರ್ಣ ಸುಳ್ಳು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT