ADVERTISEMENT

ಶ್ರೀ ಶ್ರೀ ರವಿಶಂಕರಗೆ ಜೀವಬೆದರಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 19:30 IST
Last Updated 28 ಮಾರ್ಚ್ 2015, 19:30 IST
ಶ್ರೀ ಶ್ರೀ ರವಿಶಂಕರ ಗುರೂಜಿ
ಶ್ರೀ ಶ್ರೀ ರವಿಶಂಕರ ಗುರೂಜಿ   

ಕ್ವಾಲಾಲಂಪುರ (ಪಿಟಿಐ): ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಗೆ ಇಸ್ಲಾಮಿಕ್‌ ಸ್ಟೇಟ್ (ಐಎಸ್ಐಎಸ್) ಉಗ್ರಗಾಮಿ ಸಂಘಟನೆಯಿಂದ ಪ್ರಾಣ ಬೆದರಿಕೆ ಪತ್ರಗಳು ಬಂದಿವೆ.

ಕೆಲವು ದಿನಗಳ ಹಿಂದೆ ಕಾಂಬೊಡಿಯಾದಲ್ಲಿ ಇದ್ದಾಗ ಮತ್ತು ಈಗ ಮಲೇಷ್ಯಾ ಪ್ರವಾಸದಲ್ಲಿ ಇರುವ ಗುರೂಜಿ ಅವರಿಗೆ ಉಗ್ರಗಾಮಿ ಸಂಘಟನೆಯಿಂದ ಮೂರು ಬೆದರಿಕೆ ಪತ್ರಗಳು ಬಂದಿವೆ ಎಂದು ಗುರೂಜಿ ಅವರ ನಿಕಟವರ್ತಿ ಮತ್ತು ಆರ್ಟ್ ಆಫ್ ಲಿವಿಂಗ್‌ನ ವಕ್ತಾರ ನಕುಲ್ ಧವನ್ ತಿಳಿಸಿದ್ದಾರೆ.

ಯೋಗ ಕಾರ್ಯಕ್ರಮವನ್ನು ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪತ್ರದಲ್ಲಿ ಬೆದರಿಕೆ ಹಾಕಿರುವುದರಿಂದ ನಾವು ಈ ವಿಚಾರವನ್ನು ಕೂಡಲೇ ಸ್ಥಳೀಯ ಪೊಲೀಸರಿಗೆ ಹಾಗೂ ಮಲೇಷ್ಯಾದಲ್ಲಿ ಇರುವ ಭಾರತದ ರಾಯಭಾರ ಕಚೇರಿಗೆ ತಿಳಿಸಿದ್ದೇವೆ ಎಂದು ಧವನ್ ಹೇಳಿದ್ದಾರೆ.

ಬೆಳಿಗ್ಗೆ ನಡೆದ ಯೋಗ ಶಿಬಿರದಲ್ಲಿ 10 ಸಾವಿರ ಜನರು ಪಾಲ್ಗೊಂಡಿದ್ದರು. ಪೆನಾಂಗ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ 70 ಸಾವಿರ ಜನರು ಸೇರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಒಂದು ಪತ್ರದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನ ಶಿರಚ್ಛೇಧ  ಮಾಡುತ್ತಿರುವ ಚಿತ್ರವೂ ಇದ್ದು, ಮಲೇಷ್ಯಾ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಿಗೆ ಕಾಲಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ.

ಮಲೇಷ್ಯಾ ಅಥವಾ ಇನ್ನಾವುದೇ ಮುಸ್ಲಿಂ ರಾಷ್ಟ್ರದಲ್ಲಿ ಗುರೂಜಿ ಕಾಲಿಟ್ಟರೆ ಚಿತ್ರದಲ್ಲಿ ಇರುವ ವ್ಯಕ್ತಿಯನ್ನು ಹತ್ಯೆ ಮಾಡಿದಂತೆ ಕೊಲೆ ಮಾಡಲಾಗುವುದು ಪತ್ರದಲ್ಲಿ ಬೆದರಿಸಲಾಗಿದೆ.

ಇರಾನ್ ಮತ್ತು ಇರಾಕ್ ರಾಷ್ಟ್ರಗಳ ಇಸ್ಲಾಂ ಧರ್ಮದಲ್ಲಿ ಹಸ್ತಕ್ಷೇಪ ಮಾಡಿ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿ ಎರಡೂ ರಾಷ್ಟ್ರಗಳನ್ನು ಹಿಂದೂಗಳ ರಾಷ್ಟ್ರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಗುರೂಜಿ ಅವರ ವಿರುದ್ದ ಆಪಾದಿಸಲಾಗಿದೆ. ‘ನಮ್ಮ ಬೆದರಿಕೆ ತಮಾಷೆಯಲ್ಲ, ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಕೊನೆಯದಾಗಿ ಪತ್ರದಲ್ಲಿ ಹೆದರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.