ADVERTISEMENT

ಷರೀಫ್‌ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿದ ಭ್ರಷ್ಟಾಚಾರ ನಿಗ್ರಹ ದಳ

ಪಿಟಿಐ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ಲಾಹೋರ್‌ : ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್‌ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್‌ ಖಾತೆ ಮತ್ತು ಆಸ್ತಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಮುಟ್ಟುಗೋಲು ಹಾಕಿಕೊಂಡಿದೆ. ಷರೀಫ್‌ ಕುಟುಂಬ ಭ್ರಷ್ಟಾಚಾರ ಮತ್ತು ಹಣಕಾಸಿನ ಅವ್ಯವಹಾರ ಆರೋಪ ಎದುರಿಸುತ್ತದೆ.

ಪನಾಮ ಪೇಪರ್ಸ್‌ ಹಗರಣದಲ್ಲಿ ಆರೋಪಿಯಾಗಿರುವ ಷರೀಫ್‌ ಅವರನ್ನು ಜುಲೈ 28ರಂದು ಸುಪ್ರೀಂ ಕೋರ್ಟ್‌ ಅನರ್ಹಗೊಳಿಸಿತ್ತು.

ಭ್ರಷ್ಟಾಚಾರ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಷರೀಫ್‌, ಪುತ್ರಿ ಮರಿಯಂ ಮತ್ತು ಅಳಿಯ ಸಫ್ದರ್‌ ಅವರಿಗೆ ಸೆಪ್ಟೆಂಬರ್‌ 26ರಂದು ಖುದ್ದು ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ.

ADVERTISEMENT

ನ್ಯಾಯಾಲಯದ ಸಮನ್ಸ್‌ ಮತ್ತು ಆಸ್ತಿ ಮುಟ್ಟುಗೋಲು ನೋಟಿಸನ್ನು ನ್ಯಾಷನಲ್‌ ಅಕೌಂಟಬಿಲಿಟಿ ಬ್ಯೂರೊ(ಎನ್‌ಎಬಿ) ಷರೀಫ್‌ ಅವರ ರೈವಿಂಡ್‌ ಮನೆಯ ಬಾಗಿಲಿಗೆ ಅಂಟಿಸಿದೆ. ಷರೀಫ್‌ ಅವರು ಮಕ್ಕಳ ಜೊತೆ ಅನಾರೋಗ್ಯಪೀಡಿತ ಪತ್ನಿ ಕುಲ್ಸೂಮ್‌ ಅವರನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಲಾಗದೆ ಷರೀಫ್‌ ಕುಟುಂಬ ಲಂಡನ್‌ನಲ್ಲೇ ನೆಲೆಸಲಿದೆ ಎಂದು ಸುದ್ದಿ ಹಬ್ಬಿದೆ. ಆದರೆ ಪತ್ನಿಯ ಆರೋಗ್ಯ ಸುಧಾರಿಸಿದ ನಂತರ ಷರೀಫ್‌ ತಾಯ್ನಾಡಿಗೆ ಮರಳಲಿದ್ದಾರೆ  ಎಂದು ಆಡಳಿತ ಪಕ್ಷ ಪಿಎಂಎಲ್‌–ಎನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.