ನವದೆಹಲಿ (ಪಿಟಿಐ): ಪ್ರಸಕ್ತ ಹಿಂಗಾರು ಹಂಗಾಮು ಅವಧಿಯಲ್ಲಿ ನವೆಂಬರ್ 18ರವರೆಗೆ ಒಟ್ಟು 242 ಲಕ್ಷ ಹೆಕ್ಟೇರ್ಗಳಲ್ಲಿ ಆಹಾರ ಧಾನ್ಯಗಳ ಬಿತ್ತನೆ ಕಾರ್ಯ ನಡೆದಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 243 ಲಕ್ಷ ಹೆಕ್ಟೇರ್ಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ ಗೋಧಿ ಬಿತ್ತನೆ 78.83 ಲಕ್ಷ ಹೆಕ್ಟೇರ್ಗಳಿಂದ 79.45 ಲಕ್ಷ ಹೆಕ್ಟೇರ್ಗಳಿಗೆ ಅಲ್ಪ ಏರಿಕೆ ಕಂಡಿದೆ. ಬೇಳೆಕಾಳುಗಳ ಬಿತ್ತನೆಯು 69.98 ಲಕ್ಷ ಹೆಕ್ಟೇರ್ಗಳಿಂದ 74.55 ಲಕ್ಷ ಹೆಕ್ಟೇರ್ಗಳಿಗೆ ಏರಿಕೆಯಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಸುರಿದಿರುವುದು ಮತ್ತು ಗರಿಷ್ಠ ಬೆಂಬಲ ಬೆಲೆ ನಿಗದಿಮಾಡಿರುವುದರಿಂದ ಬೇಳೆಕಾಳು ಬಿತ್ತನೆ ಹೆಚ್ಚಾಗಿದೆ ಎಂದು ಹೇಳಿದೆ.
ಏಕದಳ ಧಾನ್ಯಗಳ ಬಿತ್ತನೆ 25.98 ಲಕ್ಷ ಹೆಕ್ಟೇರ್ಗಳಲ್ಲಿ, ಎಣ್ಣೆಕಾಳುಗಳು 56.16 ಲಕ್ಷ ಹೆಕ್ಟೇರ್ಗಳಲ್ಲಿ ಬಿತ್ತನೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಅಕ್ಟೋಬರ್ ಮೊದಲ ವಾರದಿಂದ ಆರಂಭವಾಗುವ ಹಿಂಗಾರು ಹಂಗಾಮು ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕಳೆದ ವರ್ಷಕ್ಕಿಂತ ಹೆಚ್ಚಿರಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. 2015–16ರ ಹಿಂಗಾರು ಬೆಳೆ ಅವಧಿಯಲ್ಲಿ (ಅಕ್ಟೋಬರ್–ಮಾರ್ಚ್) ಆಹಾರ ಧಾನ್ಯಗಳ ಉತ್ಪಾದನೆ ಶೇ 5 ರಷ್ಟು ಹೆಚ್ಚಾಗಲಿದ್ದು, 1,330 ಲಕ್ಷ ಟನ್ಗಳಿಗೆ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದೆ. 2014–15ರ ಹಿಂಗಾರು ಬೆಳೆ ಅವಧಿಯಲ್ಲಿ 1,263 ಲಕ್ಷ ಟನ್ಗಳಷ್ಟು ಉತ್ಪಾದನೆ ಎಂದು ಸಚಿವಾಲಯ ತಿಳಿಸಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.