ಬುದ್ಧನ ಅನೇಕ ಜಾತಕ ಕಥೆಗಳಲ್ಲಿ ಇದೂ ಒಂದು. ಪಾಲಕರಿಗೆ, ಶಿಕ್ಷಕರಿಗೆ ಬಹು ಪ್ರಯೋಜನಕಾರಿಯಾಗಬಹುದಾದ ಕಥೆ. ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಅವನ ಪ್ರಧಾನಿಯಾಗಿದ್ದ. ರಾಜ್ಯ ಸುಭಿಕ್ಷವಾಗಿತ್ತು. ಆಗ ಬ್ರಹ್ಮದತ್ತನ ಪ್ರೀತಿಯ ಹಾಗೂ ಪಟ್ಟದ ಆನೆ ಮಾಂಗಲೀಕ. ಅದು ಸದಾಚಾರ ಸಂಪನ್ನವಾದ ಆನೆ. ಯಾರಿಗೂ ತೊಂದರೆ ಕೊಡುವಂಥದ್ದಲ್ಲ. ಪುಟ್ಟ ಮಕ್ಕಳು ಮುಂದೆ ಹೋಗಿ ನಿಂತರೂ ಸೊಂಡಿಲನ್ನೆತ್ತಿ ಅವರ ತಲೆಯ ಮೇಲಿರಿಸಿ ಪ್ರೀತಿ ತೋರಿಸುತ್ತಿತ್ತು.
ರಾಜ ಅದನ್ನೇರಿ ಹೊರಟಾಗ ಮಂದಗತಿಯಲ್ಲಿ ನಡೆದು ರಾಜನಿಗೆ ಒಂದಿನಿತೂ ಕುಲುಕಾಟವಾಗದ ಹಾಗೆ ನೋಡಿಕೊಳ್ಳುತ್ತಿತ್ತು. ಹೀಗಿದ್ದ ಶಾಂತ ಸ್ವಭಾವದ ಮಾಂಗಲೀಕ ಒಂದು ದಿನ ಅತ್ಯಂತ ವ್ಯಗ್ರವಾಯಿತು. ಅದಕ್ಕೆ ಸಮಾಧಾನಮಾಡಲು ಹತ್ತಿರ ಬಂದ, ದಿನನಿತ್ಯವೂ ತನ್ನನ್ನು ನೋಡಿಕೊಳ್ಳುತ್ತಿದ್ದ ಮಾವುತನನ್ನು ಸೊಂಡಿಲಿನಲ್ಲಿ ಸುತ್ತಿ, ಮೇಲಕ್ಕೆತ್ತಿ, ನೆಲಕ್ಕಪ್ಪಳಿಸಿ ಕೊಂದು ಹಾಕಿತು. ಎಲ್ಲರೂ ಭೀತರಾದರು.
ಮಾಂಗಲೀಕದ ಈ ಕೋಪವನ್ನು ಯಾರೂ ಕಂಡಿರಲಿಲ್ಲ. ಮರುದಿನ ಅದನ್ನು ಪಳಗಿಸಲು ಹೋದ ಮತ್ತೊಬ್ಬ ಮಾವುತನನ್ನೂ ತುಳಿದು ಕೊಂದಿತು. ಮಾಂಗಲೀಕದ ಹತ್ತಿರ ಹೋಗುವುದು ಸಾವಿನ ಬಾಗಿಲಿಗೆ ಹೋದಂತೆ ಎಂದು ಎಲ್ಲರೂ ಭಾವಿಸಿ ದೂರ ಉಳಿದರು. ರಾಜ ಬ್ರಹ್ಮದತ್ತನಿಗೆ ಚಿಂತೆಯಾಯಿತು. ಇಷ್ಟು ಶಾಂತ ಸ್ವಭಾವದ, ತಿಳಿವಳಿಕೆಯುಳ್ಳ ಪಟ್ಟದಾನೆ ಹೀಗೆ ಒಮ್ಮೆಲೇ ಉಗ್ರವಾಗಲು ಕಾರಣವೇನು? ಆಸ್ಥಾನದ ಪ್ರಾಣಿವೈದ್ಯರನ್ನು ಕೇಳಿ ನೋಡಿದ. ಅವರಿಗೂ ಇದೊಂದು ಒಗಟಾಗಿತ್ತು.
ಪರೀಕ್ಷೆ ಮಾಡಲು ಹತ್ತಿರವೂ ಹೋಗುವಂತಿಲ್ಲ. ಕೊನೆಗೆ ರಾಜ, ಬೋಧಿಸತ್ವನಿಗೆ ಇದಕ್ಕೆ ಪರಿಹಾರವನ್ನು ಸೂಚಿಸಬೇಕೆಂದು ಕೇಳಿದ. ಬೋಧಿಸತ್ವ ಹೋಗಿ ಸರಪಳಿಗಳಿಂದ ಬಂಧಿತವಾದ ಮಾಂಗಲೀಕವನ್ನು ನೋಡಿದ. ಅದರ ಕೆಂಪಾದ ಕಣ್ಣುಗಳಿಂದ ಕಿಡಿಗಳು ಹಾರುವಂತೆ ತೋರುತ್ತಿತ್ತು. ಅದು ಸರಪಳಿಗಳನ್ನು ಎಳೆದಾಡುತ್ತ ಘೋರವಾಗಿ ಹೂಂಕರಿಸುತ್ತಿತ್ತು. ಬೋಧಿಸತ್ವ ಗಮನಿಸಿದ. ಮಾಂಗಲೀಕವನ್ನು ಕಟ್ಟಿದ ಜಾಗೆ ಗಜ ಶಾಲೆಯ ಕೊನೆಯದು. ಅದರ ಹಿಂದೆ ಕಾಡಿನ ಪ್ರದೇಶ. ಈತ ನಡೆದು ಗಜಶಾಲೆಯ ಹಿಂದೆ ಹೋದ. ಅಲ್ಲಿ ಒಂದಿಷ್ಟು ಇದ್ದಿಲು, ಸೌದೆ, ಬಿಸಾಕಿದ ತಂಗಳು ಆಹಾರ ಕಂಡವು. ಇಲ್ಲಿ ಯಾರು ಬರುತ್ತಾರೆ ಎಂದು ಗಜಶಾಲೆಯವರನ್ನು ಕೇಳಿದ. ರಾತ್ರಿಯಾದ ಮೇಲೆ ಇಲ್ಲಿ ಯಾರೂ ಕಾವಲುಗಾರರು ಇಲ್ಲದಿರುವುದರಿಂದ ಮತ್ತಾರೂ ಬರುವುದು ಸಾಧ್ಯವಿಲ್ಲವೆಂದರು.
ಬೋಧಿಸತ್ವ ಆ ರಾತ್ರಿ ಮರೆಯಾಗಿ ಗಜಶಾಲೆಯ ಹಿಂದೆ ಕುಳಿತ. ರಾತ್ರಿ ಕೆಲವು ಕಳ್ಳರು ಅಲ್ಲಿಗೆ ಬಂದರು. ಅವರು ಕಳ್ಳತನ ಮಾಡಿದ ಪರಿಯನ್ನು ಜನರನ್ನು ಹೊಡೆದು ಪೀಡಿಸಿದ ರೀತಿಯನ್ನು ಹೇಳಿಕೊಂಡು ಚರ್ಚೆ ಮಾಡಿದರು. ಅವರು ಕುಳಿತ ಸ್ಥಳ ಮಾಂಗಲೀಕವನ್ನು ಕಟ್ಟಿ ಹಾಕಿದ ಭಾಗದ ಹಿಂದುಗಡೆಯೇ ಇತ್ತು. ಅವರು ಮಾತನಾಡುವುದನ್ನು ನೋಡಿದರೆ ಅಲ್ಲಿಗೆ ನಿತ್ಯ ಬರುತ್ತಿದ್ದಂತೆ ಕಂಡಿತು. ಬೋಧಿಸತ್ವ ಅವರನ್ನು ಹಿಡಿಸಿ ಹಾಕಿದ. ನಂತರ ಮರುದಿನದಿಂದ ಸಜ್ಜನರನ್ನು ಕರೆಸಿ ಸಾಧು ಜೀವನ ಹೇಗೆ ಶ್ರೇಷ್ಠ, ಕೋಪದಿಂದ ಯಾವ ಅನಾಹುತಗಳಾಗುತ್ತವೆ, ಹಿಂಸೆ ಕೆಟ್ಟದ್ದು ಎಂಬ ಬಗ್ಗೆ ಆನೆಗೆ ಕೇಳುವಂತೆ ಮಾತನಾಡುವಂತೆ ಕೇಳಿಕೊಂಡ.
ಹದಿನೈದು ದಿನಗಳು ಹೀಗೆ ನಡೆದಾಗ ಮತ್ತೆ ಮಾಂಗಲೀಕದ ನಡೆ ಬದಲಾಯಿತು, ಮೊದಲಿನ ಶಾಂತ ಸ್ವಭಾವ ಮರುಕಳಿಸಿತು. ಬೋಧಿಸತ್ವ ರಾಜನಿಗೆ ಹೇಳಿದ. ‘ಆನೆ ದಿನಾಲು ಅನ್ಯಾಯದ, ಅತ್ಯಾಚಾರದ, ಕ್ರೌರ್ಯದ ಮಾತುಗಳನ್ನು ಕೇಳಿ ಕೇಳಿ ತನ್ನ ಸ್ವಭಾವವನ್ನೇ ಬದಲಿಸಿಕೊಂಡಿತು. ನಂತರ ಒಳ್ಳೆಯ ಮಾತುಗಳನ್ನು ಗಮನಿಸಿ, ಗಮನಿಸಿ ಮತ್ತೆ ಮೊದಲಿನಂತಾಯಿತು.
’ ಬ್ರಹ್ಮದತ್ತ ಮೆಚ್ಚಿದ. ದಿನನಿತ್ಯ ಕೇಳುವ ಮಾತು ಒಂದು ಆನೆಯ ಚರ್ಯೆಯನ್ನೇ ಬದಲಿಸಬಹುದಾದರೆ ನಮ್ಮ ಮನೆಯ ಪುಟ್ಟ ಮಕ್ಕಳು ದಿನನಿತ್ಯ ನೋಡುವ, ಕೇಳುವ ಹಿಂಸೆಯ, ಭ್ರಷ್ಟತೆಯ, ಮಾತುಗಳು ಏನು ಪರಿಣಾಮ ಬೀರಿಯಾವು ಎಂಬುದನ್ನು ಊಹಿಸಬಹುದೇ? ನಮ್ಮ ಮಕ್ಕಳು ಸದಭಿರುಚಿಯವರಾಗಬೇಕೆಂದು ನಾವು ಬಯಸಿದರೆ ಅವರ ಮುಂದೆ ಸದಾಕಾಲ ಒಳ್ಳೆಯ, ಸದಭಿರುಚಿಯ ಮಾತುಗಳನ್ನೇ, ಸುಸಂಸ್ಕೃತಿಯ ನಡತೆಗಳನ್ನೇ ಪ್ರದರ್ಶಿಸುತ್ತಿರಬೇಕು. ಹಾಗಾದಾಗ ಮುಂದೆ ಸುಸಂಸ್ಕೃತ ಸಮಾಜವನ್ನು ನಿರೀಕ್ಷಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.