ADVERTISEMENT

ನೀರಿಗಾಗಿ ಕೂಲಿ ಮಾಡಿದ ಪೌರಾಯುಕ್ತ

ಹಾವೇರಿ: ನೀರಿನ ಮಹತ್ವ ಕುರಿತು ವಾಟ್ಸ್‌ಆ್ಯಪ್‌ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ

ಹರ್ಷವರ್ಧನ ಪಿ.ಆರ್.
Published 14 ಏಪ್ರಿಲ್ 2017, 19:30 IST
Last Updated 14 ಏಪ್ರಿಲ್ 2017, 19:30 IST
ನೀರಿಗಾಗಿ ಕೂಲಿ ಮಾಡಿದ ಪೌರಾಯುಕ್ತ
ನೀರಿಗಾಗಿ ಕೂಲಿ ಮಾಡಿದ ಪೌರಾಯುಕ್ತ   

ಹಾವೇರಿ:ನನ್ನ ಪ್ರೀತಿಯ ನಾಗರಿಕ ಬಂಧುಗಳೇ, ಅಣ್ಣ–ತಮ್ಮಂದಿರೇ, ಅಕ್ಕ–ತಂಗಿಯರೇ, ತಂದೆ–ತಾಯಿಯರೇ, ಉಜ್ವಲ ಭಾರತದ ನಿರ್ಮಾಪಕರೇ... ಹನಿ ನೀರು ಸಹ ಅಮೃತದಂತೆ. ನಾವು ನದಿಯಲ್ಲಿ ನೀರಿನ ಸಂಗ್ರಹಣೆಗೆ ಕಷ್ಟ ಪಡುವ ಚಿತ್ರಣವನ್ನು ನೀವು ವಿಡಿಯೊದಲ್ಲಿ ನೋಡಬಹುದು. ನೀವು, ನಿಮ್ಮ ವಾರ್ಡಿನಲ್ಲಿ ಮತ್ತು ಮನೇಲಿ ನೀರು ದುರುಪಯೋಗವಾಗದಂತೆ ಸಾಧ್ಯವಾದ ಮಟ್ಟಿಗೆ ತಡೆಯಬೇಕು ಎಂದು ಈ ಮೂಲಕ ನಿಮ್ಮೊಂದಿಗೆ ಕೈ ಜೋಡಿಸಿ ಸಹಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ’     –ನಿಮ್ಮವ ಶಂಕರ್ 
ಇದು ವಾಟ್ಸ್‌ಆ್ಯಪ್‌ನಲ್ಲಿರುವ ನಗರಸಭೆ ಆಯುಕ್ತ ಶಂಕರ ಜಿ.ಎಸ್‌ ಅವರ ಮನವಿ.

ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸಲು ಅವರು ಕೂಲಿ ಕೆಲಸ ಮಾಡಿ, ಅದರ ವಿಡಿಯೊವನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಿದ್ದಾರೆ. ಕೆಂಚಾರಗಟ್ಟಿಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ್ದ ಮರಳಿನ ತಡೆಗೋಡೆಯ ಮೇಲ್ಭಾಗ ಒಡೆದಿದೆ. ಈ ತಡೆಗೋಡೆಯ ಮರು ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರ ಜೊತೆ ಕೂಲಿ ಮಾಡುವ ಮೂಲಕ ಜಾಗೃತಿ ಮೂಡಿಸಲು ಅವರು ಯತ್ನಿಸಿದ್ದಾರೆ.

ಬರ, ಅಂತರ್ಜಲ ಕುಸಿತದ ಪರಿಣಾಮ ನಗರದಲ್ಲಿ ನೀರಿನ ತೀವ್ರ ಸಮಸ್ಯೆ ಇದೆ. ಆದರೆ, ನಗರದಲ್ಲಿ ಹಲವೆಡೆ ನೀರು ಪೋಲಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಹಿನ್ನೆಲೆ:  ತುಂಗಭದ್ರಾ ನದಿಗೆ ತಾಲ್ಲೂಕಿನ ಕೆಂಚಾರಗಟ್ಟಿ ಬಳಿ ನಿರ್ಮಿಸಲಾದ ಜಾಕ್‌ವೆಲ್‌ನಿಂದ ಹಾವೇರಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಇಲ್ಲಿ ನದಿಗೆ ಮರಳಿನ ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಮಳೆ ಕೊರತೆಯಿಂದಾಗಿ  ಡಿಸೆಂಬರ್‌ನಲ್ಲೇ ನದಿಯಲ್ಲಿ ನೀರು ಬತ್ತಿ ಹೋಗಿದೆ.

ನಂತರ, ಜಿಲ್ಲಾಡಳಿತದ ಮನವಿ ಮೇರೆಗೆ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲಾಗಿತ್ತು. ಆದರೆ, ನದಿ ತೀರದ (ಬಳ್ಳಾರಿ, ಹಾವೇರಿ, ದಾವಣಗೆರೆ ಜಿಲ್ಲೆಗಳ) ರೈತರು ಸಾವಿರಾರು ಪಂಪ್‌ಗಳನ್ನು ಬಳಸಿ ಕೃಷಿಗೆ ನೀರು ಹಾಯಿಸಿಕೊಂಡರು. ನದಿ ಮತ್ತೆ ಬತ್ತಿ ಹೋಗಿತ್ತು. ಕುಡಿಯುವ ನೀರಿನ ಸಲುವಾಗಿ ಈಚೆಗೆ ಎರಡನೇ ಬಾರಿಗೆ ಭದ್ರಾ ಜಲಾಶಯದಿಂದ ನೀರು ಬಿಡಲಾಗಿದೆ.

ನದಿ ಕೆಳಗಿನ ತೀರದ ನಗರ, ಪಟ್ಟಣಗಳ ನೀರಿನ ಬೇಡಿಕೆಯನ್ನೂ ಪರಿಗಣಿಸಿಕೊಂಡು ಹೆಚ್ಚುವರಿ ನೀರು ಬಿಡಲಾಗಿದೆ. ಇದರಿಂದಾಗಿ ಕೆಂಚಾರಗಟ್ಟಿಯಲ್ಲಿ ನದಿಗೆ ನಿರ್ಮಿಸಿದ್ದ ಮರಳಿನ ತಡೆಗೋಡೆಯ ಮೇಲ್ಭಾಗ ಒಡೆದಿದೆ.
* * *
ತ್ಯಾಜ್ಯ ವಿಲೇವಾರಿ ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಬೇಕು. ಸೇವಾ ಮನೋಭಾವ ಬರಬೇಕು. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡುತ್ತಿರುತ್ತೇನೆ.
ಶಂಕರ ಜಿ.ಎಸ್
ಪೌರಾಯುಕ್ತರು, ಹಾವೇರಿ ನಗರಸಭೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.