ಕೆ.ಆರ್.ಪೇಟೆ: ಹನಿ ನೀರಿಗೂ ಪರದಾಡುತ್ತಿರುವ ಇಂದಿನ ಸಂದರ್ಭ ದಲ್ಲಿ ಪಾಲಿಹೌಸ್ಗೆ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡು ವ್ಯವಸಾಯವನ್ನು ಲಾಭದಾಯಕ ವಾಗಿಸಿಕೊಂಡಿದ್ದಾರೆ ತಾಲ್ಲೂಕಿನ ಸಿಂಧಘಟ್ಟ ಹಾಗೂ ಬಿಲ್ಲರಾಮನ ಹಳ್ಳಿಯ ಇಬ್ಬರು ರೈತರು.ಪಾಲಿಹೌಸ್ನಲ್ಲಿ ತರಕಾರಿ, ಹೂವು, ಹಣ್ಣುಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆಯ ಹಲವು ಕಡೆ ಇದನ್ನು ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಮಳೆನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಂಡವರು ವಿರಳ.
ಮಳೆ ನೀರನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಂರಕ್ಷಿಸಿ ಬೇಸಾಯ ಮಾಡುವ ಈ ಪದ್ಧತಿಯನ್ನು ಕನಿಷ್ಠ ಒಂದರಿಂದ ಎರಡು ಎಕರೆ ಜಾಗವಿರುವ ಕಡೆಗಳಲ್ಲಿ ಅಳವಡಿಸ ಲಾಗುತ್ತದೆ. ಪಾಲಿ ಹೌಸ್ ಚಾವಣಿಯ ಮೇಲೆ ಬೀಳುವ ಮಳೆಯ ಒಂದು ಹನಿಯೂ ವ್ಯರ್ಥವಾಗದಂತೆ ಹೊಂಡಕ್ಕೆ ಹೋಗುವಂತೆ ಮಾಡಲಾಗುತ್ತದೆ. ಸಂಗ್ರಹಗೊಂಡ ನೀರನ್ನು ಹನಿ ನೀರಾವರಿ ಮೂಲಕ ಬೆಳೆಗೆ ಹೋಗುವಂತೆ ಮಾಡಲಾಗಿದೆ. ಗೊಬ್ಬರದ ಮಿಶ್ರಣವನ್ನೂ ಈ ಮೂಲಕವೇ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.
ಸಿಂಧಘಟ್ಟದಲ್ಲಿ ಭಾನುಪ್ರತಾಪ್ ಹಾಗೂ ಬಿಲ್ಲರಾಮನಹಳ್ಳಿಯಲ್ಲಿ ದೇವ ರಾಜು ಅವರು ಈ ಪದ್ಧತಿ ಅಳವಡಿಸಿಕೊಂಡು ದಪ್ಪಮೆಣಸಿನ ಕಾಯಿ ಬೆಳೆದು ಬರಗಾಲದಲ್ಲಿಯೂ ಲಾಭ ಗಳಿಸಿದ್ದಾರೆ. ‘ಮಳೆ ನೀರು ವ್ಯರ್ಥವಾಗುವುದನ್ನು ಕಂಡು ಬೇಸರವಾಗುತ್ತಿತ್ತು, ಆದರೆ, ನೀರು ಮರುಪೂರಣ ಮಾಡುವ ಬಗ್ಗೆ ತಿಳಿದಿರಲಿಲ್ಲ. ತೋಟಗಾರಿಕೆ ಅಧಿಕಾರಿ ಜಯರಾಮು ಅವರು ಈ ಪದ್ಧತಿ ಬಗ್ಗೆ ತಿಳಿಸಿಕೊಟ್ಟರು.ಅದನ್ನು ಅಳವಡಿಸಿಕೊಂಡು ಲಾಭ ಪಡೆಯುತ್ತಿದ್ದೇವೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.