ಪರಿಸರ ಕಾಳಜಿಯ ಜೊತೆಗೆ ಕಸದಿಂದ ರಸ ಮಾಡುವ ಕಲೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಆಡುಗೋಡಿಯ ಲೀಸಾ ಸ್ಕೂಲ್ ಆಫ್ ಡಿಸೈನ್ ಟೈರ್ಗಳಿಂದ ಕುರ್ಚಿ ತಯಾರಿಸಿ ಗಮನ ಸೆಳೆದಿದೆ.
ಉಪಯೋಗಕ್ಕೆ ಬಾರದ ಟೈರ್ಗಳು ಸುಂದರ ಕುರ್ಚಿ ಗಳಾಗಿದ್ದು, ಇದು ಕಾಲೇಜಿನ ವಿದ್ಯಾರ್ಥಿಗಳ ಸೃಜನಶೀಲತೆಯ ಪ್ರಯತ್ನ. ಇತ್ತೀಚೆಗೆ ನಡೆದ ಕಾಲೇಜಿನ ಓಪನ್ ಡೇ ಕಾರ್ಯಕ್ರಮದಲ್ಲಿ ಈ ಕುರ್ಚಿಗಳೇ ಪ್ರಮುಖ ಆಕರ್ಷಣೆಯಾಗಿದ್ದು ವಿಶೇಷ. ಕಾರ್ಯಕ್ರಮವನ್ನು ‘ಶುದ್ಧಿ’ ಚಲನಚಿತ್ರ ತಂಡ ಉದ್ಘಾಟಿಸಿತು.
‘ಉಪಯೋಗಕ್ಕೆ ಬಾರದ ಟೈರ್ಗಳನ್ನು ಸಾಮಾನ್ಯವಾಗಿ ಸುಡಲಾಗುತ್ತದೆ. ಇದರಿಂದ ವಿಷಕಾರಿ ಅನಿಲ ವಾತಾವರಣಕ್ಕೆ ಸೇರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಈ ಪ್ರಯೋಗ ಮಾಡಲಾಗಿದೆ’ ಎನ್ನುತ್ತಾರೆ ಕಾಲೇಜಿನ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ಅವಿ ಕೇಸ್ವಾನಿ.
‘ರಬ್ಬರ್ ಮೃದು ಹಾಗೂ ದೀರ್ಘ ಬಾಳಿಕೆಯ ಗುಣ ಹೊಂದಿದ್ದು ಯಾವುದೇ ಪೀಠೋಪಕರಣಕ್ಕೆ ಹೊಂದಿಕೊಳ್ಳುತ್ತದೆ. ವಿದ್ಯಾರ್ಥಿಗಳು ಬಿಹಾರದ ಮಧುಬನಿ ಕಲೆಯಿಂದ ಸ್ಫೂರ್ತಿ ಪಡೆದು ರಬ್ಬರ್ನಿಂದ ಕುರ್ಚಿಗಳನ್ನು ತಯಾರಿಸಿದ್ದಾರೆ’ ಎನ್ನುತ್ತಾರೆ ಅವರು.
‘ಮರುಬಳಕೆಯ ಕಲೆಯಿಂದ ಸ್ಫೂರ್ತಿ ಪಡೆದು ಇಂತಹ ಮರುಬಳಕೆಯ ಕೆಲಸದಿಂದ ಮಾತ್ರ ಬೆಂಗಳೂರಿನ ಕಸದ ಸಮಸ್ಯೆ ನಿವಾರಿಸಲು ಸಾಧ್ಯ. ಮುಂದೆ ಇದೇ ರೀತಿ ಉಪಯೋಗಕ್ಕೆ ಬಾರದ ವಸ್ತುಗಳಿಂದ ಹಲವು ಕಲೆ ಅರಳಿಸುವ ಯೋಜನೆ ಇದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.