ಶಾಲಾ ಮಕ್ಕಳಿಗೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಮತ್ತು ವಿತರಣೆಯಲ್ಲಿ ಮತ್ತಷ್ಟು ಮುತುವರ್ಜಿ ಮತ್ತು ಎಚ್ಚರಿಕೆ ವಹಿಸುವ ಅಗತ್ಯವನ್ನು ಬೆಂಗಳೂರಿನ ದೇವರಜೀವನಹಳ್ಳಿ ಪ್ರಕರಣ ಎತ್ತಿತೋರಿಸಿದೆ. ಇಲ್ಲಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಂಜೇರಿದ ಆಹಾರ ಸೇವಿಸಿ 355 ಮಕ್ಕಳು ಅಸ್ವಸ್ಥರಾಗಿ ಪೋಷಕರನ್ನು ಆತಂಕಕ್ಕೆ ದೂಡಿದ್ದರು.
ಅದೃಷ್ಟವಶಾತ್ ಮಕ್ಕಳೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂಬುದು ಸಮಾಧಾನದ ಸಂಗತಿಯಾದರೂ ಇಂತಹ ಅವಘಡಗಳು ಮರುಕಳಿಸದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ವಹಿಸಲು ಈ ಪ್ರಕರಣ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಕಳೆದ ವರ್ಷ ಬಿಹಾರದ ಸರನ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಸೇವಿಸಿದ 23 ಮಕ್ಕಳು ಅಸುನೀಗಿದ್ದರು. ಈ ಅವಘಡ ದೇಶದಾದ್ಯಂತ ಆಘಾತ ಮೂಡಿಸಿತ್ತು.
ಅದರಿಂದ ಪಾಠ ಕಲಿತಿಲ್ಲ ಎಂಬುದಕ್ಕೆ ಬೆಂಗಳೂರಿನ ಪ್ರಕರಣವೇ ತಾಜಾ ನಿದರ್ಶನ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ರಾಷ್ಟ್ರೀಯ ಕಾರ್ಯಕ್ರಮ. ಇದು, ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವುದು, ಅಪೌಷ್ಟಿಕತೆ ಹಾಗೂ ಸಾಮಾಜಿಕ ತಾರತಮ್ಯ ನಿವಾರಿಸುವಂತಹ ಉದಾತ್ತ ಧ್ಯೇಯವನ್ನು ಹೊಂದಿದೆ. ಸುಮಾರು 11 ಕೋಟಿ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾರೆ. ಇದು ವಿಶ್ವದ ಬೃಹತ್ ಶಾಲಾ ಊಟದ ಯೋಜನೆಯಾಗಿದೆ. ಆದರೆ ಅನುಷ್ಠಾನದಲ್ಲಿನ ಲೋಪಗಳು ಅವಘಡಗಳಿಗೆ ಎಡೆಮಾಡಿಕೊಡುತ್ತಿರುವುದು ಅತ್ಯಂತ ದುರದೃಷ್ಟದ ಸಂಗತಿ. ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು.
ಶಿಕ್ಷಣದ ಗುರಿ ಸಾಧನೆಯಲ್ಲಿ ಬಿಸಿಯೂಟ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಿಸಿಯೂಟ ಪೂರೈಕೆ ಹೊಣೆಯನ್ನು ಸರ್ಕಾರವೇ ವಹಿಸಿಕೊಂಡಿದೆ. ಹಲವೆಡೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲೂ ಅನುಷ್ಠಾನಗೊಂಡಿದೆ. ನಿರ್ವಹಣೆ ಚೆನ್ನಾಗಿರುವ ಕಡೆ ಸಮರ್ಪಕವಾಗಿ ನಡೆದಿದೆ. ಇಂತಹ ಸಮರ್ಪಕತೆಯನ್ನು ಎಲ್ಲ ಕಡೆ ಕಾಯ್ದುಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ ಆಗಬೇಕು. ಮುಗ್ಧ ಮಕ್ಕಳ ಹಸಿವು ತಣಿಸಬೇಕಾದ ಊಟ, ಯಾರೋ ಒಂದಿಬ್ಬರ ನಿರ್ಲಕ್ಷ್ಯದಿಂದ ಆತಂಕಕ್ಕೆ ಕಾರಣವಾಗಬಾರದು.
ಶಾಲೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿರುವುದೂ ಇಂತಹ ಅವಘಡಗಳು ಸಂಭವಿಸಲು ಒಂದು ಕಾರಣ. ದೇವರಜೀವನಹಳ್ಳಿ ಶಾಲೆ ಅವ್ಯವಸ್ಥೆಯಿಂದ ಕೂಡಿದೆ ಎಂಬುದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೇ ಒಪ್ಪಿಕೊಂಡಿದ್ದಾರೆ. ಮೂಲ ಸೌಕರ್ಯ ವೃದ್ಧಿಗೆ ₨ 1 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿಯೂ ಪ್ರಕಟಿಸಿದ್ದಾರೆ. ಇಂತಹ ಅವ್ಯವಸ್ಥೆ ಈ ಶಾಲೆಗಷ್ಟೇ ಸೀಮಿತ ಎಂದು ಭಾವಿಸಬೇಕಾಗಿಲ್ಲ. ಪ್ರಾಥಮಿಕ ಶಿಕ್ಷಣವನ್ನು ಕಡೆಗಣಿಸಿರುವುದರ ದ್ಯೋತಕ ಇದು.
ಶಾಲಾ ಪರಿಸರದಲ್ಲಿ ಅದರಲ್ಲೂ ಅಡುಗೆ ಕೋಣೆಯಲ್ಲಿ ನೈರ್ಮಲ್ಯ ಕಾಪಾಡುವುದು ಆದ್ಯತೆ ಆಗಬೇಕು. ‘ಇಸ್ಕಾನ್’ ಸಂಸ್ಥೆಯು ತನ್ನ ಅಕ್ಷಯ ಪಾತ್ರೆ ಯೋಜನೆಯಡಿ ತಯಾರಿಸಿದ ಊಟವನ್ನು ಈ ಶಾಲೆಗೆ ಪೂರೈಸಿತ್ತು. ‘ಈ ಶಾಲೆಗೆ ನೀಡಿದ ಆಹಾರವನ್ನೇ ಇನ್ನೂ ಕೆಲವು ಶಾಲೆಗಳಿಗೆ ಪೂರೈಸಲಾಗಿತ್ತು. ಈ ಶಾಲೆ ಹೊರತುಪಡಿಸಿ ಬೇರೆ ಎಲ್ಲಿಂದಲೂ ದೂರು ಬಂದಿಲ್ಲ’ ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ. ಹೀಗಾಗಿ ಆಹಾರ ನಂಜೇರಲು ಕಾರಣರಾದವರನ್ನು ಪತ್ತೆ ಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.