ನಮ್ಮ ಹೆಣ್ಣುಮಕ್ಕಳನ್ನು ಯಾವ ಶಾಲೆಗೆ ಕಳಿಸೋಣ? ಯಾವ ಶಾಲೆ ಸುರಕ್ಷಿತವಾಗಿದೆ ಎಂಬಂಥ ಪ್ರಶ್ನೆ ಇಂದಿನ ಪೋಷಕರದಾಗಿದೆ. ನಮ್ಮ ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆಯ ಕುಸಿತವನ್ನು ಈ ಪ್ರಶ್ನೆ ಧ್ವನಿಸುತ್ತದೆ. ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಲ್ಲಿ ನಾಲ್ಕು ವಿವಿಧ ಶಾಲೆಗಳಲ್ಲಿ ಪುಟ್ಟ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ನಡೆದಿರುವುದು ವರದಿಯಾಗಿದೆ. ವಿದ್ಯೆ ಕಲಿಯಬೇಕಾದ ತಾಣ, ಲೈಂಗಿಕ ಆಕ್ರಮಣಗಳ ತಾಣಗಳಾಗುತ್ತಿರುವುದು ಆತಂಕಕಾರಿ.
ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯೊಂದಿಗೆ ಮಕ್ಕಳ ವಿಶ್ವಾಸದ ಕೊಂಡಿಯನ್ನು ಕಳಚಿಹಾಕುವ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಈ ಎಲ್ಲಾ ಪ್ರಕರಣಗಳು ಖಾಸಗಿ ಶಾಲೆಗಳಲ್ಲಿ ನಡೆದಿವೆ. ಆದರೆ ಈ ಶಾಲೆಗಳ ಮೇಲೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಇಲಾಖೆಗೆ ನಿಯಂತ್ರಣವಿಲ್ಲ. ಮಕ್ಕಳ ಸುರಕ್ಷತೆಗೆ ಗಮನ ನೀಡದ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಈಗ ಭರವಸೆ ನೀಡಿದ್ದಾರೆ. ಇಂತಹ ಭರವಸೆಯ ಮಾತುಗಳು ಬರೀ ಮಾತುಗಳಾಗಿಯಷ್ಟೇ ಉಳಿಯಬಾರದು.
ಲೈಂಗಿಕ ದೌರ್ಜನ್ಯ ವಿಚಾರ ಕುರಿತಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿದ್ದರೂ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುವುದು ಆಘಾತಕಾರಿ. ಹೀಗಾಗಿ ಅಪರಾಧಿಗಳಲ್ಲಿ ಶಿಕ್ಷಾ ಭಯ ಮೂಡಿಸುವುದು ಅತ್ಯಗತ್ಯವಾಗಿ ಆಗಬೇಕಿರುವ ಕೆಲಸ. ಇದಕ್ಕಾಗಿ ಇಂತಹ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಮತ್ತೊಂದು ಭರವಸೆ ನೀಡಿದ್ದಾರೆ.ಈ ಭರವಸೆ ಶೀಘ್ರ ಅನುಷ್ಠಾನಗೊಳ್ಳಲಿ. ಅಲ್ಲದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅನ್ವಯ ದಾಖಲಾಗುವ ಪ್ರಕರಣಗಳನ್ನು ಇನ್ನು ಮುಂದೆ ಎಸಿಪಿ ಮಟ್ಟದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಇಂತಹ ಪ್ರಕರಣಗಳ ಗಂಭೀರತೆಯ ಬಗ್ಗೆ ಸಮಾಜಕ್ಕೆ ಸಂದೇಶ ರವಾನಿಸಲು ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಮಾಡುವ ಹೊಣೆ ಸರ್ಕಾರದ್ದಾಗಿದೆ.
ಶಾಲೆಗಳಲ್ಲಿ ಮಕ್ಕಳ ಮೇಲೆ ಇಂತಹ ಆಕ್ರಮಣಗಳಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದುದು ಈ ಹೊತ್ತಿನ ಅಗತ್ಯ. ಮಕ್ಕಳ ಸುರಕ್ಷತೆಗಾಗಿ ಈಗಾಗಲೇ ನೀಡಲಾಗಿರುವ ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸದ ಶಾಲೆಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸಬೇಕಾಗುತ್ತದೆ ಎಂಬುದನ್ನು ಶಾಲೆಗಳು ಮನಗಾಣಬೇಕು. ಶಾಲೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲೇ ಅವರ ಪೂರ್ವಾಪರಗಳನ್ನು ತೀವ್ರ ಪರಿಶೀಲನೆಗೊಳಪಡಿಸುವುದು ಕಡ್ಡಾಯವಾಗಬೇಕು. ಸಾಮಾಜಿಕ ಕಾರಣಗಳಿಗಾಗಿ ಅನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಾರದೆಯೂ ಹೋಗಬಹುದು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಎಷ್ಟರ ಮಟ್ಟಿಗೆ ಸಂವೇದನಾಶೀಲವಾಗಿವೆ ಎಂಬುದು ಪ್ರಶ್ನೆ. ಇಂತಹ ಪ್ರಕರಣಗಳನ್ನು ತಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದೂ ಮುಖ್ಯ. ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶದ ಕುರಿತಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ಕುಟುಂಬ, ಶಾಲೆ ಹಾಗೂ ಒಟ್ಟು ಸಮಾಜದಲ್ಲಿ ಸಂವೇದನಾಶೀಲತೆ ಮೂಡಿಸಲು ಪ್ರಚಾರಾಂದೋಲನ ನಡೆಯಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.