ಗೋವೆ ಜನಮತ ಸಂಗ್ರಹ ಕಾಯಿದೆ ರಾಜ್ಯಾಂಗಬದ್ಧ
ಪಣಜಿ, ಜ. 11– ಗೋವೆ ಜನಾಭಿಪ್ರಾಯ ಸಂಗ್ರಹ ಕಾಯಿದೆಯ ರಾಜ್ಯಾಂಗ ಬದ್ಧತೆಯನ್ನು ಗೋವೆಯ ಜುಡೀಷಿಯಲ್ ಕಮಿಷನರ್ ನ್ಯಾಯಮೂರ್ತಿ ಶ್ರೀ ಜಟ್ಲಿ ಅವರು ಇಂದು ಎತ್ತಿಹಿಡಿದು ಇಬ್ಬರು ಮತದಾರರು ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿದರು. ಪಾರ್ಲಿಮೆಂಟಿಗೆ ಈ ಶಾಸನವನ್ನು ರಚಿಸುವ ಅಧಿಕಾರವಿದೆ ಎಂದೂ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಭಾರತಕ್ಕೆ ಶೈಕ್ಷಣಿಕ ನೆರವು ಕೂಟ: ಯುನೆಸ್ಕೊ ವರದಿ ಪರಿಶೀಲನೆಯಲ್ಲಿ
ನವದೆಹಲಿ, ಜ. 11– ಶಿಕ್ಷಣ ಕ್ಷೇತ್ರದಲ್ಲಿ ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳ ಕೂಟವೊಂದನ್ನು ರಚಿಸಲು ವಿಶ್ವಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಯತ್ನ ನಡೆಸುವ ಸೂಚನೆ ಕಂಡುಬರುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಆರಂಭಿಸಲು ನೆರವು ಕೂಟದ ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡಲಿವೆ. ಅಂತರರಾಷ್ಟ್ರೀಯ ಪರಿಣತರ ನೆರವಿನಿಂದ ಯುನೆಸ್ಕೊ ಈ ಬಗ್ಗೆ ಸಿದ್ಧಗೊಳಿಸಿರುವ ವರದಿಯೊಂದನ್ನು ಭಾರತ ಸರ್ಕಾರ ಈಗ ಪರಿಶೀಲನೆ ನಡೆಸುತ್ತಿದೆ.
ಪ್ರಧಾನಿ ವಿರುದ್ಧ ಸ್ಪರ್ಧೆಗೆ ಸಹಕಾರ ನೀಡಲು ಜನಸಂಘಕ್ಕೆ ಎಸ್.ಎಸ್.ಪಿ. ಕರೆ
ಬೆಂಗಳೂರು, ಜ. 11– ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನೇರ ಸ್ಪರ್ಧೆಯಲ್ಲಿ ಎದುರಿಸಲು ಎಸ್.ಎಸ್.ಪಿ. ಅಭ್ಯರ್ಥಿ ಶ್ರೀ ನರೇಂದ್ರ ಸಿಂಗ್ ಅವರಿಗೆ ಅವಕಾಶ ಮಾಡಿಕೊಡಬೇಕೆಂದು, ಸಂಯುಕ್ತ ಸೋಷಲಿಸ್್ಟ ಪಕ್ಷದ ಪಾರ್ಲಿಮೆಂಟರಿ ಮಂಡಲಿ ಕಾರ್ಯದರ್ಶಿ ಶ್ರೀ ಜಿ. ಮುರಹರಿ ಅವರು ಇಂದು ಇಲ್ಲಿ ಜನಸಂಘಕ್ಕೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.