ADVERTISEMENT

ಗುರುವಾರ, 21–9–1967

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ಭಾರತೀಯ ಸಂಜಾತರಿಗೆ ಎಲ್ಲಾ ಸೌಲಭ್ಯ: ಇಂದಿರಾ ಆಶ್ವಾಸನೆ
ಕಂಡಿ, ಸಿಂಹಳ, ಸೆ. 20–
ಭಾರತ– ಸಿಂಹಳ ಒಪ್ಪಂದವು ಅನ್ವಯವಾಗುವವರೆಗೆ ಭಾರತದಲ್ಲಿ ಮರು ವಸತಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಆಶ್ವಾಸನೆ ಇತ್ತರು. ತಮ್ಮ ಗೌರವಾರ್ಥ ಕಂಡಿ ಪೌರ ಸಭೆಯು ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸರಳ ಪದ್ಧತಿ: ಸಿಂಹಳದಿಂದ ಸ್ವದೇಶಕ್ಕೆ ಹಿಂತಿರುಗುವ ಭಾರತೀಯ ಸಂಜಾತರ, ಮುಖ್ಯವಾಗಿ ಎಸ್ಟೇಟ್ ವಾಸಿಗಳ ಆಸ್ತಿಪಾಸ್ತಿಗಳ ಬಗ್ಗೆ ಶೀಘ್ರ ಇತ್ಯರ್ಥಕ್ಕಾಗಿ ಸರಳವಾದ ಪದ್ಧತಿಯನ್ನು ಅನುಸರಿಸುವುದಾಗಿ ಸಿಂಹಳ ಸರ್ಕಾರ ಭರವಸೆ ಕೊಟ್ಟಿದೆಯೆಂದೂ ಅವರು ನುಡಿದರು.

ಕಾವೇರಿ ನೀರು ಯೋಜನೆಗೆ ವಿಶ್ವಬ್ಯಾಂಕ್ ಸಾಲ ಬೇಕಿಲ್ಲ: ರಾಜ್ಯ ಸರ್ಕಾರದ ನಿರ್ಧಾರ
ಬೆಂಗಳೂರು, ಸೆ. 20–
ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಯೋಜನೆಗೆ ವಿಶ್ವಬ್ಯಾಂಕ್ ಸಾಲ ಬೇಕಿಲ್ಲವೆಂದು ಕೇಂದ್ರ ಸರಕಾರಕ್ಕೆ ತಿಳಿಸಲು ಸಚಿವ ಸಂಪುಟ ಇಂದು ನಿರ್ಧರಿಸಿತು.

ADVERTISEMENT

ವಿಶ್ವಬ್ಯಾಂಕ್ ಸೂಚಿಸಿದ್ದ ನೀರಿನ ದರ ಮತ್ತು ಲಾಭದ ಅಂಶ ನಾಗರಿಕರಿಗೆ ಹೊರೆಯಾಗುವುದೆಂಬ ಅಂಶವನ್ನು ಪರಿಗಣಿಸಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಯಿತೆಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯನವರು ತಿಳಿಸಿದರು.

5 ಜಿಲ್ಲೆಗಳಲ್ಲಿ ಅಭಾವ ಪರಿಸ್ಥಿತಿ
ಬೆಂಗಳೂರು, ಸೆ. 20–
ರಾಜ್ಯದ ಬಹುತೇಕ ಪ್ರದೇಶದಲ್ಲಿ ಫಸಲಿನ ಪರಿಸ್ಥಿತಿ ತೃಪ್ತಿಕರವಾಗಿದ್ದರೂ ಐದು ಜಿಲ್ಲೆಗಳಲ್ಲಿ ಈಗಾಗಲೇ ಭಾಗಶಃ ಬರದ ಬೇಗೆ ತಲೆದೋರಿದೆ. ಗುಲ್ಬರ್ಗದ ಸೇಡಂ, ಷಹಪುರ, ಜೇವರ್ಗಿ, ಬಿಜಾಪುರದ ಬಾಗಲಕೋಟೆ ಮತ್ತಿತರ ಕೆಲವು ಭಾಗಗಳು ರಾಯಚೂರು, ಕೋಲಾರ ಮತ್ತು ಮೈಸೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆ ಅಭಾವದಿಂದ ಬೆಳೆಗಳು ಬಾಗಿ ಈಗಾಗಲೇ ಪರಿಹಾರ ಕಾಮಗಾರಿಗಳು ಪ್ರಾರಂಭವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.