ADVERTISEMENT

ಗುರುವಾರ, 2–3–1967

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 3:58 IST
Last Updated 2 ಮಾರ್ಚ್ 2017, 3:58 IST
ಭಾರತಕ್ಕೆ 30 ಲಕ್ಷ ಟನ್ ಅಮೆರಿಕನ್ ಆಹಾರ
ವಾಷಿಂಗ್ಟನ್, ಮಾ. 1– ಅಮೆರಿಕದಿಂದ ಇನ್ನಷ್ಟು ಜರೂರು ಆಹಾರದ ನೆರವು ದೊರೆಯಬಹುದೆಂಬ ಭಾರತದ ಆಸೆಯನ್ನು ಅಮೆರಿಕದ ವ್ಯವಸಾಯ ಇಲಾಖೆಯ ಕಾರ್ಯದರ್ಶಿ ಆರ್ವಿಲ್ ಫ್ರೀಮನ್ ನಿನ್ನೆ ಅನುಮೋದಿಸಿದರು.
 
ಭಾರತದ ಅಭಾವಪೀಡಿತ ಪ್ರದೇಶಗಳಿಗೆ ಆಹಾರದ ಜರೂರು ರವಾನೆಯನ್ನು ಮುಂದುವರೆಸಬೇಕೆಂಬ ಜಂಟಿ ನಿರ್ಣಯವೊಂದಕ್ಕೆ ಪ್ರತಿನಿಧಿಗಳ ಸಭೆಯ ವ್ಯವಸಾಯ ಸಮಿತಿಯಲ್ಲಿ ಬೆಂಬಲ ಸೂಚಿಸುತ್ತ ಅವರು ಈ ಅನುಮೋದನೆ ಯನ್ನು ವ್ಯಕ್ತಪಡಿಸಿದರು.
 
ಆಂಧ್ರ ಮುಖ್ಯಮಂತ್ರಿ: ಬ್ರಹ್ಮಾನಂದ ರೆಡ್ಡಿ ಅವರ ಒಮ್ಮತದ ಆಯ್ಕೆ ಖಚಿತ
ಹೈದರಾಬಾದ್, ಮಾ. 1– ನಾಳೆ ನಡೆಯುವ ಕಾಂಗ್ರೆಸ್ ಶಾಸಕರ ಪಕ್ಷದ ಸಭೆಯಲ್ಲಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿಯವರು ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗುವುದು ನಿಶ್ಚಯವಾಗಿದೆ.
 
ಪಕ್ಷದ ಹಿತದ ದೃಷ್ಟಿಯಿಂದ ತಾವು ಸ್ಪರ್ಧಿಸುವುದಿಲ್ಲವೆಂದೂ ಮುಖ್ಯಮಂತ್ರಿ ಅವರಿಗೆ ಬೇಷರತ್ತಾಗಿ ಸಹಕಾರವನ್ನು ನೀಡುವುದಾಗಿಯೂ ಭಿನ್ನಮತೀಯರ ನಾಯಕ ಎ.ಸಿ. ಸುಬ್ಬಾರೆಡ್ಡಿ  ಪ್ರಕಟಿಸಿದ್ದಾರೆ.
 
ಡಿ.ಎಂ.ಕೆ. ಶಾಸಕ ಪಕ್ಷದ ನಾಯಕರಾಗಿ ಅಣ್ಣಾದೊರೆ ಆಯ್ಕೆ
ಮದರಾಸು, ಮಾ.1– ‘ಮದರಾಸಿನ ಹೊಸ ವಿಧಾನಸಭೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಶಾಸನಸಭಾ ಪಕ್ಷದ ನಾಯಕರಾಗಿ 58 ವರ್ಷದ ಶ್ರೀ ಸಿ.ಎನ್. ಅಣ್ಣಾದೊರೆ ಅವರು ಇಂದು ಸರ್ವಾನುಮತದಿಂದ ಆಯ್ಕೆಯಾದರು. ರಾಜ್ಯದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರವಾದ ಡಿ.ಎಂ.ಕೆ. ಸರ್ಕಾರದ ನಾಯಕತ್ವವನ್ನು ಅವರು ವಹಿಸಿಕೊಳ್ಳುವರು.
 
ಎಡ– ಬಲ ಕಮ್ಯುನಿಸ್ಟ್ ಪಕ್ಷಗಳ ಐಕ್ಯಕ್ಕಾಗಿ ಮಾತುಕತೆ ನಡೆದಿಲ್ಲ: ಡಾಂಗೆ ಹೇಳಿಕೆ
ತಿರುವನಂತಪುರ, ಮಾ. 1– ಎರಡು ಕಮ್ಯುನಿಸ್ಟ್ ಪಕ್ಷಗಳ ಐಕ್ಯ ಸಾಧಿಸಲು ಯಾವುದೇ ಮಾತುಕತೆಗಳು ನಡೆದಿಲ್ಲ ವೆಂದು ಬಲ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಶ್ರೀ ಎಸ್.ಎ. ಡಾಂಗೆ ಇಂದು ಇಲ್ಲಿ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.