*ಕಾರ್ಖಾನೆ ಸದ್ಯಕ್ಕೆ ಬಂದ್
ಬೆಂಗಳೂರು, ಡಿ. 12– ಫೌಂಡ್ರಿಯೂ ಸೇರಿ ಕಿರ್ಲೋಸ್ಕರ್ ಕಾರ್ಖಾನೆಯ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪನಿಯ ಆಡಳಿತ ವರ್ಗವು ತಿಳಿಸಿದೆ.
ಕಂಪನಿಯ ಕಾರ್ಯದರ್ಶಿ ಶ್ರೀ ಕೆ.ಎಸ್. ಲಕ್ಷ್ಮೀನಾರಾಯಣ ರಾವ್ರವರು ಇಂದು ಹೊರಡಿಸಿರುವ ಒಂದು ಸೂಚನೆಯಲ್ಲಿ ಈಗಿನ ಪರಿಸ್ಥಿತಿಯಲ್ಲಿ ಕಾರ್ಖಾನೆಯು ಕೆಲಸ ಮಾಡುವುದು ಅಸಾಧ್ಯವೆಂದು ತಿಳಿಸಲಾಗಿದೆ.
*ಇಂಗ್ಲಿಷ್ ಹೇರಿಕೆ ಸಲ್ಲದು; ಯು.ಪಿ. ಸೋಷಲಿಸ್ಟ್ ಸಚಿವರ ಮನವಿ
ನವದೆಹಲಿ, ಡಿ. 12– ‘ಹಿಂದಿ ಮಾತನಾಡುವ ರಾಜ್ಯಗಳ ಮೇಲೆ ಇಂಗ್ಲಿಷನ್ನು ಹೊರಿಸುವ’ ಭಾಷಾ ತಿದ್ದುಪಡಿ ಮಸೂದೆಯನ್ನು ಕೈಬಿಡುವಂತೆ ಒತ್ತಾಯಪಡಿಸುವ ಮನವಿಯೊಂದನ್ನು ಉತ್ತರ ಪ್ರದೇಶದ ಎಸ್.ಎಸ್.ಪಿ.ಗೆ ಸೇರಿದ ಇಬ್ಬರು ಸಚಿವರು ರಾಷ್ಟ್ರಪತಿ, ಲೋಕಸಭೆಯ ಮತ್ತು ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ.
*ಮಹಾಜನ್ ಅವರ ಅಂತ್ಯಕ್ರಿಯೆ
ಚಂಡೀಗಢ, ಡಿ. 12– ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದ ಭಾರತದ ಮಾಜಿ ಶ್ರೇಷ್ಠ ನ್ಯಾಯಮೂರ್ತಿ ಶ್ರೀ ಮೆಹರ್ಚಂದ್ ಮಹಾಜನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಇಲ್ಲಿ ನಡೆಯಿತು. ವೇದ ಮಂತ್ರ ಘೋಷಗಳ ಮಧ್ಯೆ ಚಿತೆಗೆ ಅಗ್ನಿಸ್ಪರ್ಶ ಮಾಡಿಸಲಾಯಿತು.
* ಭಾಷಾ ಮಸೂದೆ ಒಪ್ಪಿಕೊಳ್ಳುವಂತೆ ಇಂದಿರಾ ಮನವಿ
ನವದೆಹಲಿ, ಡಿ. 12– ರಾಷ್ಟ್ರದ ಐಕಮತ್ಯದ ದೃಷ್ಟಿಯಿಂದ ಮತ್ತು ಹಿಂದೀತರ ಜನರ ಭಯ ನಿವಾರಿಸುವ ದೃಷ್ಟಿಯಿಂದ ಅಧಿಕೃತ ಭಾಷಾ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಬೇಕೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಲೋಕಸಭೆಯಲ್ಲಿ ಮನವಿ ಮಾಡಿಕೊಂಡರು.
‘ಆನಂತರ ನಾವೊಂದೆಡೆ ಕೂತು ಸಂಪರ್ಕ ಭಾಷೆಯಾಗಿ ಹಿಂದಿ ಬೆಳವಣಿಗೆಗೆ ಮಾರ್ಗಗಳನ್ನು ಕಂಡು ಹಿಡಿಯಬಹುದು’ ಎಂದು ಅವರು ಹೇಳಿದರು.
ಅಧಿಕೃತ ಭಾಷಾ ಮಸೂದೆಯ ಮೇಲೆ ಚರ್ಚೆಯಾದಾಗ ಪ್ರಧಾನಿ ಮಧ್ಯ ಪ್ರವೇಶಿಸಿ ಈ ರೀತಿ ಮನವಿ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.