ಲೋಕಸಭೆಯ ನಾಮಮಾತ್ರ ಅಧಿವೇಶನ ರದ್ದು
ನವದೆಹಲಿ, ಫೆ. 28– ಪಾರ್ಲಿಮೆಂಟಿನ ‘ನಾಮಮಾತ್ರ ಅಧಿವೇಶನ’ ಕರೆಯುವ ಏರ್ಪಾಟನ್ನು ಮುಂದುವರಿಸಬೇಕೆಂಬ ತನ್ನ ಮುಂಚಿನ ನಿರ್ಧಾರವನ್ನು ಕೇಂದ್ರ ಸರ್ಕಾರ ಇಂದು ಹಠಾತ್ತನೆ ಬದಲಾಯಿಸಿ, ಮಾರ್ಚ್ ತಿಂಗಳಿನಲ್ಲಿ ಹೊಸ ಲೋಕಸಭೆಯ ಅಧಿವೇಶನವನ್ನು ಕರೆಯಲು ನಿರ್ಧರಿಸಿತು.
ಹೊಸ ಲೋಕಸಭೆಯನ್ನು ಕರೆಯುವು ದಕ್ಕಿರುವ ರಾಜ್ಯಾಂಗ ಅಡ್ಡಿಗಳನ್ನು ನಿವಾರಿಸುವ ಸುಗ್ರೀವಾಜ್ಞೆಯೊಂದಕ್ಕೆ ರಾಷ್ಟ್ರಪತಿ ಇಂದು ರಾತ್ರಿ ಸಹಿ ಹಾಕಿದರು.
ಈಗಿನ ಲೋಕಸಭೆಯನ್ನು ತತ್ಕ್ಷಣ ವಿಸರ್ಜಿಸಲಾಗುತ್ತದೆ. ಇಂದು ಅವಸರದಲ್ಲಿ ಕರೆಯಲಾದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಸಂಪುಟದ ಸಭೆ ಒಂದು ಗಂಟೆ ಕಾಲ ನಡೆಯಿತು.
ರಾಷ್ಟ್ರಪತಿಯಾಗಲು ನಾನು ಅರ್ಹ: ಲೋಹಿಯಾ
ನವದೆಹಲಿ, ಫೆ. 28– ರಾಷ್ಟ್ರಪತಿಯಾಗುವುದಕ್ಕೆ ಅಗತ್ಯವಾದ ಎಲ್ಲ ಅರ್ಹತೆಗಳೂ ನನ್ನಲ್ಲಿವೆ. ‘ಆದರೆ ನಾಲ್ಕೂವರೆ ಸಾವಿರ ಮತದಾರರಿಗೆ ನಾನು ಒಪ್ಪಿಗೆಯಿಲ್ಲ’.ಸಂಯುಕ್ತ ಸೋಷಲಿಸ್ಟ್ ಪಕ್ಷದ ನಾಯಕ ಡಾ. ರಾಮ್ ಮನೋಹರ ಲೋಹಿಯಾ ಅವರು ಹೇಳಿದ ಮಾತಿದು.
ರಾಜ್ಯ ಸಂಪುಟದ ರಾಜೀನಾಮೆ ಸಲ್ಲಿಕೆ
ಬೆಂಗಳೂರು, ಫೆ. 28– ರಾಜ್ಯದ ವಿಧಾನಸಭೆ ಇಂದಿನಿಂದ ವಿಸರ್ಜಿತ ವಾಗುತ್ತಿದ್ದಂತೆ ಮಂತ್ರಿಮಂಡಳವೂ ರಾಜ್ಯಪಾಲರಿಗೆ ರಾಜೀನಾಮೆ ನೀಡಿತು.
ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ತಮ್ಮ ಮತ್ತು ಪಾರ್ಲಿಮೆಂಟರಿ ಕಾರ್ಯದರ್ಶಿಗಳೂ ಸೇರಿ ತಮ್ಮ ಸಚಿವ ಸಹೋದ್ಯೋಗಿಗಳ ರಾಜೀನಾಮೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.