ನೂರು ರೂ. ಖೋಟಾ ನೋಟು ತಯಾರಕರ ರಾಜ್ಯವ್ಯಾಪಿ ಜಾಲ ಪತ್ತೆ
ಮಂಗಳೂರು, ಏ. 2– ರಾಜ್ಯವ್ಯಾಪಿ ಇರುವ, ನೂರು ರೂಪಾಯಿ ಖೋಟಾನೋಟು ತಯಾರಕರ ಮತ್ತು ಚಲಾವಣೆ ತಂಡವೊಂದನ್ನು ಸಿ.ಐ.ಡಿ. ಇಲಾಖೆ ಪತ್ತೆಹಚ್ಚಿದೆ.
ಈ ಸಂಬಂಧದಲ್ಲಿ ರಾಜ್ಯದ ನಾನಾ ಕಡೆಗಳಿಂದ ಒಟ್ಟು 35 ಮಂದಿಯನ್ನು ಬಂಧಿಸಿ ಶಿವಮೊಗ್ಗ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ತಂಡದಲ್ಲಿ ಒಬ್ಬ ಕಲಾವಿದ, ಒಬ್ಬ ಫೋಟೊಗ್ರಾಫರ್, ಮುದ್ರಣಕಾರರು, ವರ್ತಕರು ಹಾಗೂ ಒಬ್ಬ ಪತ್ರಿಕೋದ್ಯಮಿ ಸೇರಿದ್ದಾರೆ.
ಸಕ್ಕರೆ ಬೆಲೆ ಏರಿಕೆ ತಡೆಗಟ್ಟದಿದ್ದರೆ ಉಗ್ರ ಕ್ರಮ: ಜಗಜೀವನರಾಂ
ನವದೆಹಲಿ, ಏ. 2– ಪೇಟೆಯಲ್ಲಿ ಸಕ್ಕರೆ ಬೆಲೆ ಏರುತ್ತಲೇ ಇದ್ದರೆ ಸರಕಾರ ಮಧ್ಯೆ ಪ್ರವೇಶಿಸಬೇಕಾದೀತೆಂದು ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶ್ರೀ ಜಗಜೀವನ ರಾಂ ಅವರು ಸಕ್ಕರೆ ತಯಾರಕರಿಗೆ ಇಂದು ಎಚ್ಚರಿಕೆ ನೀಡಿದರು.
ಭಾರತೀಯ ಸಕ್ಕರೆ ಗಿರಣಿಗಳ ಸಂಘದ 35ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸಚಿವರು ಉದ್ಘಾಟಿಸುತ್ತ ಇತ್ತೀಚೆಗೆ ಸಕ್ಕರೆ ಬೆಲೆ ಏರಿದುದಕ್ಕಾಗಿ ಕಳವಳ ವ್ಯಕ್ತಪಡಿಸಿ ಇದು ಮುಂದುವರೆಯುವುದಕ್ಕೆ ಸರಕಾರ ಅವಕಾಶ ಕೊಡಲಾರದೆಂದರು.
ಭದ್ರಾವತಿ ಉಕ್ಕು ಕಾರ್ಖಾನೆಯ ಹೊಸ ದಾಖಲೆ
ಭದ್ರಾವತಿ, ಏ. 2– ಮಾರ್ಚ್ 31 ರಂದು ಅಂತ್ಯಗೊಂಡ ಆರ್ಥಿಕ ಸಾಲಿನಲ್ಲಿ 13.04 ಕೋಟಿ ರೂ. ಬೆಲೆಯ ಉತ್ಪಾದನೆಯನ್ನು ಮಾರಾಟ ಮಾಡಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯು ಹೊಸ ದಾಖಲೆಯನ್ನು ಸ್ಥಾಪಿಸಿದೆ.
ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಶ್ರೀ ಎಂ.ಡಿ.ಶಿವನಂಜಪ್ಪನವರು ಈ ವಿಚಾರವನ್ನು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.