* ಷರತ್ತು ಅನುಸರಿಸದ ಹೊರತು ನಾಗಾರ್ಜುನ ಸಾಗರಕ್ಕೆ ಅನುಮತಿ ಇಲ್ಲ ಎಂದ ಕೇಂದ್ರ
ನವದೆಹಲಿ, ಜುಲೈ 10– ಕೇಂದ್ರ ಸರ್ಕಾರ 1963ರ ಮಾರ್ಚ್ ತಿಂಗಳಲ್ಲಿ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯಂತೆ ಷರತ್ತುಗಳನ್ನು ಅನುಸರಿಸದ ಹೊರತು ಆಂಧ್ರಪ್ರದೇಶದ ನಾಗಾರ್ಜುನ ಸಾಗರ ಎರಡನೇ ಹಂತದ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.
ಈ ಯೋಜನೆಗೆ ಅನುದಾನ ನೀಡುವ ಕುರಿತು ಲೋಕಸಭೆಯಲ್ಲಿ ಇಂದು ನಡೆದ ಚರ್ಚೆಯ ವೇಳೆ ನೀರಾವರಿ ಹಾಗೂ ಇಂಧನ ಸಚಿವ ಡಾ. ಕೆ.ಎಲ್. ರಾವ್ ಈ ಮಾಹಿತಿಯನ್ನು ನೀಡಿದರು.
***
* ಧಾನ್ಯ ಖರೀದಿಯಲ್ಲಿ ಏಕಸ್ವಾಮ್ಯ ಇಲ್ಲ: ಶ್ರೀ ಜತ್ತಿ
ಬೆಂಗಳೂರು, ಜುಲೈ 10- ಸರ್ಕಾರ ಆಹಾರ ಧಾನ್ಯ ಖರೀದಿಯಲ್ಲಿ ಏಕಸ್ವಾಮ್ಯ ಹೊಂದುವುದನ್ನು ಆಹಾರ ಸಚಿವ ಶ್ರೀ ಜತ್ತಿ ಅವರು ತಳ್ಳಿಹಾಕಿದ್ದಾರೆ.
ಆಹಾರ ಧಾನ್ಯ ಖರೀದಿಗೆ ಹಣ ನೀಡುವುದನ್ನು ಕುರಿತು ಮೈಸೂರು ವಿಧಾನಸಭೆಯಲ್ಲಿ ಇಂದು ನಡೆದ ಚರ್ಚೆಯ ವೇಳೆ ಅವರು ಈ ವಿಚಾರ ತಿಳಿಸಿದರು.
‘ರಾಜ್ಯದ ಆಹಾರ ನೀತಿ ಇತರ ರಾಜ್ಯಗಳ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ವಾಸ್ತವಾಂಶಗಳಿಂದ ಕೂಡಿದೆ. ಆದ್ದರಿಂದ ಧಾನ್ಯ ಖರೀದಿ ವಿಚಾರದಲ್ಲಿ ಶಾಸನಾತ್ಮಕ ನಿಬಂಧನೆಗಳನ್ನು ಹೇರಲು ಸರ್ಕಾರ ಇಚ್ಛಿಸುವುದಿಲ್ಲ’ ಎಂದು ಶ್ರೀ ಜತ್ತಿ ಹೇಳಿದರು.
***
* ಮಂಗಳೂರಿನಲ್ಲಿ ರಸಗೊಬ್ಬರ ಘಟಕ ಸ್ಥಾಪನೆಗೆ ನಿರ್ಧಾರ
ಬೆಂಗಳೂರು, ಜುಲೈ 10– ಮಂಗಳೂರಿನಲ್ಲಿ 52.5 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರಸಗೊಬ್ಬರ ತಯಾರಿಕಾ ಘಟಕ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆಹಾರ ಸಚಿವ ಶ್ರೀ ಜತ್ತಿ ತಿಳಿಸಿದರು.
ವಿಧಾನಸಭೆಯಲ್ಲಿಂದು ಈ ಮಾಹಿತಿ ನೀಡಿದ ಸಚಿವರು, ‘15 ಕೋಟಿ ರೂಪಾಯಿ ಮೂಲ ಬಂಡವಾಳದಲ್ಲಿ ಕಂಪೆನಿ ಆರಂಭಿಸಲಾಗುತ್ತಿದ್ದು, ಜಿ.ಎಸ್. ದುಗ್ಗಲ್ ಅವರು ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.