ತತ್ಕ್ಷಣ ಕನ್ನಡದಲ್ಲಿ ಆಡಳಿತ ಸಂಪುದ ಪ್ರಮುಖ ನಿರ್ಧಾರ
ಬೆಂಗಳೂರು, ಫೆ. 26– ರಾಜ್ಯಾದ್ಯಂತ ತಾಲ್ಲೂಕು ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ತತ್ಕ್ಷಣ ಜಾರಿಗೆ ತರಲು ಮಂತ್ರಿಮಂಡಲದ ಸಭೆ ತೀರ್ಮಾನ ಕೈಗೊಂಡಿತು.
ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರಬೇಕೆಂಬ 1965ರ ತೀರ್ಮಾನವನ್ನು ಕಾರ್ಯರೂಪಕ್ಕೆ ತರುವ ಹಾದಿಯಲ್ಲಿ ಈ ನಿರ್ಧಾರ ಪ್ರಮುಖ ಹಾಗೂ ಪರಿಣಾಮಕಾರಿಯಾದ ಪ್ರಥಮ ಹೆಜ್ಜೆಯಾಗಿದೆ.
ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ ರಾಜ್ಯದ ವಿಧಾನ ಮಂಡಲ 1965ರಲ್ಲಿ ಶಾಸನವನ್ನು ಮಾಡಿತು.
*
ತುಕೋಳ್ ಆಯೋಗದ ವರದಿ ಜೂನ್ ಅಂತ್ಯದ ವೇಳೆಗೆ ಸಿದ್ಧ
ಬೆಂಗಳೂರು, ಫೆ. 26– ತುಕೋಳ್ ನೇತೃತ್ವದ ವೇತನ ಆಯೋಗವು ಅಂತಿಮ ವರದಿಯನ್ನು 1968ರ ಜೂನ್ ತಿಂಗಳ ಕೊನೆಯ ವೇಳೆಗೆ ಸಲ್ಲಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗ್ಡೆ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
*
ಸೀಸೆಗಳಲ್ಲಿ ಸೇಂದಿ ಮಾರಾಟ ಸಲಹೆ
ಬೆಂಗಳೂರು, ಫೆ. 26– ಅಕ್ರಮ ಬೆರಕೆಯನ್ನು ತಪ್ಪಿಸಲು ಸೇಂದಿಯನ್ನು ಮೊಹರಾದ ಸೀಸೆಗಳಲ್ಲಿ ಮಾರಬೇಕೆಂಬ ಸಲಹೆಯನ್ನು ಪರಿಶಿಲಿಸುವುದಾಗಿ ಹಣಕಾಸು ಉಪಸಚಿವ ಶ್ರೀ ಎಚ್.ಆರ್. ಅಬ್ದುಲ್ ಗಫಾರ್ ಅವರು ವಿಧಾನಸಭೆಯಲ್ಲಿ ಹೇಳಿದರು.
*
ಹೇಮಾವತಿ ಯೋಜನೆ
ಕಾಮಗಾರಿ ವಿಳಂಬದ ಬಗ್ಗೆ ಕ್ರಮ: ಸಚಿವರ ಸೂಚನೆ
ಬೆಂಗಳೂರು, ಫೆ. 26– ‘ಹೇಮಾವತಿ ಯೋಜನೆಯ ಕೆಲವು ಭಾಗಗಳಲ್ಲಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ’ ಎಂದು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ಹೇಳಿ ‘ಸಂಬಂಧಪಟ್ಟ ಕಂಟ್ರಾಕ್ಟರ್ಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಚ್ಚುಮರೆ ಇಲ್ಲದೆ ತಿಳಿಸಿದ್ದೇನೆ’ ಎಂದರು.
ಸಚಿವರು ಇತ್ತೀಚೆಗೆ ಯೋಜನೆಯ ಪ್ರದೇಶಕ್ಕೆ ಬೇಟಿಯಿತ್ತು ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.